ರಕ್ತದ ಮಡುವಿನಲ್ಲಿ ಬಿದ್ದಿದ್ದ ಬೈಕ್ ಸವಾರ: ಮಾನವೀಯತೆ ಮರೆತ ಜನರು

ಶನಿವಾರ, 13 ಫೆಬ್ರವರಿ 2016 (13:35 IST)
ಬೆಂಗಳೂರಿನಲ್ಲಿ ಭೀಕರ ಬೈಕ್ ಅಪಘಾತ ಸಂಭವಿಸಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಬೈಕ್ ಸವಾರನನ್ನು ರಕ್ಷಿಸಲು ಯಾರೂ ಮುಂದೆ ಬರದೇ ಮೊಬೈಲ್‌ನಲ್ಲಿ ದೃಶ್ಯವನ್ನು ಸೆರೆಹಿಡಿಯುವ ಧಾವಂತದಲ್ಲಿ ಜನರು ಮುಳುಗಿದ ಘಟನೆ ಸಂಭವಿಸಿದೆ.  ಗಾಯಗೊಂಡು ಬಿದ್ದಿದ್ದ ಬೈಕ್ ಸವಾರ ಅಣ್ಣಮಲೈ ರಾಜು ಎಂಬವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವುದಕ್ಕೆ ಯಾರೊಬ್ಬರೂ ಮುಂದೆ ಬರದೇ ಮಾನವೀಯತೆ ಮರೆತುಹೋದಂತೆ ವಾಹನ ಚಾಲಕರು ವರ್ತಿಸಿದರು.

 ಕರ್ನೂಲು ಜಿಲ್ಲೆಯವರಾದ ಇವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು,  ಬೆಳಿಗ್ಗೆ 11 ಗಂಟೆ ಸುಮಾರಿಗೆ ದೇವನಹಳ್ಳಿ ಕಡೆಗೆ ವಾಪಸು ಹೋಗುತ್ತಿದ್ದ ಸಂದರ್ಭದಲ್ಲಿ ಚಿಕ್ಕಜಾಲದ ಬಳಿ  ಬೈಕ್ ಡಿವೈಡರ್‌ಗೆ ಡಿಕ್ಕಿಹೊಡೆದು ಸ್ಕಿಡ್ ಆಗಿ ಕೆಳಕ್ಕೆ ಬಿದ್ದಿದ್ದರಿಂದ ಅವರಿಗೆ ತಲೆ ಮತ್ತು ಮುಖಕ್ಕೆ ಗಾಯವಾಗಿತ್ತು.  ರಸ್ತೆಯಲ್ಲಿ ನೂರಾರು ವಾಹನಗಳು ಓಡಾಡುತ್ತಿದ್ದರೂ ಯಾವ ವಾಹನ ಚಾಲಕರೂ ಅವರ ನೆರವಿಗೆ ಬಂದಿರಲಿಲ್ಲ.  

ವಾಹನ ಮಾಲೀಕರಿಗೆ ಅವರನ್ನು ಆಸ್ಪತ್ರೆಗೆ ಸೇರಿಸುವಂತೆ ಅಂಗಲಾಚಿದರೂ ಯಾರ ಮನಸ್ಸೂ ಕರಗಲಿಲ್ಲ ಎಂದು ದಾರಿಹೋಕರು ಹೇಳಿದ್ದಾರೆ. ವಾಹನದಲ್ಲಿ ರಕ್ತದ ಕಲೆಗಳಾಗುತ್ತವೆಂಬ ಕಾರಣದ ಮೇಲೆ ಕೆಲವು ಚಾಲಕರು  ವಾಹನದಲ್ಲಿ ಕರೆದೊಯ್ಯಲು ನಿರಾಕರಿಸಿದರು.  ಸುಮಾರು 10 ನಿಮಿಷಗಳವರೆಗೆ ಯಾರೂ ಅವರನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಲಿಲ್ಲ,.  ಕೆಲವರು ಆಂಬ್ಯುಲೆನ್ಸ್‌ಗೆ ಕರೆ ಮಾಡುವ ಯತ್ನದಲ್ಲಿದ್ದರು.  ಕೊನೆಗೆ ಪೊಲೀಸರಿಗೆ ಹೊಯ್ಸಳ ಜೀಪ್‌ ಅಲ್ಲಿಗೆ ಆಗಮಿಸಿದಾಗ ಜೀಪಿನಲ್ಲಿ ಕರೆದುಕೊಂಡುಹೋಗಿ  ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. 

ವೆಬ್ದುನಿಯಾವನ್ನು ಓದಿ