ಇದೇ ವೇಳೆ ಮಾತನಾಡಿದ ನಾಯಕ ಜಗ್ಗೇಶ್, ಕಾಂಗ್ರೆಸ್ ಪಕ್ಷಕ್ಕೆ ಕೇವಲ ಕೆಲವೇ ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಬೆಂಗಳೂರಿನ ಜನ ಬುದ್ಧಿ ಕಲಿಸಿದ್ದಾರೆ. ಆದರೂ ಕೂಡ ಕಾಂಗ್ರೆಸ್ಗೆ ಬುದ್ಧಿ ಬಂದಿಲ್ಲ. ಜೆಡಿಎಸ್ ಪಕ್ಷದೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಳ್ಳುವ ಮೂಲಕ ಹಿಂಬಾಗಿಲಿನಿಂದ ನುಗ್ಗಲು ಯತ್ನಿಸುತ್ತಿದೆ. ಅಲ್ಲದೆ ಕಾಂಗ್ರೆಸ್ ಹೈಕಮಾಂಡ್ಗಳೂ ಕೂಡ ನೀವು ಹಿಂದಿನಿಂದ, ಮುಂದಿನಿಂದ ಅಥವಾ ಮೇಲಿನಿಂದ ಹೇಗಾದರೂ ಕೂಡ ತೂರಿ ಅಧಿಕಾರ ಹಿಡಿಯಿರಿ ಎಂದು ಸೂಚಿಸಿದ್ದಾರೆ. ಇದರಿಂದ ತನ್ನ ಕುರ್ಚಿ ಅಲ್ಲಾಡುತ್ತದೆ ಎಂಬ ಭಯದಿಂದ ಸಿಎಂ ಸಿದ್ದರಾಮಯ್ಯನವರು ಈ ಅನೀತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ಬಿಬಎಂಪಿ ಫಲಿತಾಂಶದಿಂದ ಕಾಂಗ್ರೆಸ್ ಪಕ್ಷ ಬುದ್ದಿ ಕಲಿಯಬೇಕಿತ್ತು. ಕಾಂಗ್ರೆಸ್ನ ಈ ಕುತಂತ್ರದಿಂದ ಮುಂದಿನ ವಿಧಾನಸಭೆಯಲ್ಲಿ ಬಿಜೆಪಿ ಸಾಕಷ್ಟು ಬಹುಮತ ಗಳಿಸುವುದು ಖಚಿತ. ಅದಕ್ಕೆ ಕಾಂಗ್ರೇಸಿಗರೇ ಅನುವು ಮಾಡಿಕೊಡುತ್ತಿದ್ದಾರೆ ಎಂದರು.
ಪಕ್ಷದ ನಾಯಕ, ಮಾಜಿ ಡಿಸಿಎಂ, ಶಾಸಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇಂದಿನಿಂದ ಐದು ದಿನಗಳ ಕಾಲ ನಿರಂತರವಾಗಿ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ ಬಿಜೆಪಿಯ ಉನ್ನತ ನಾಯಕರಾದ ಜಗ್ಗೇಶ್, ಮಾಳವಿಕಾ ಅವಿನಾಶ್, ವಿಧಾನ ಪರಿಷತ್ ಸದಸ್ಯ ಅಶ್ವತ್ಥ್ ನಾರಾಯಣ, ನಗರದ ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್, ಶಾಸಕ ಸುರೇಶ್ ಕುಮಾರ್ ಸೇರಿದಂತೆ ಬಿಜೆಪಿಯ ಅನೇಕ ಮಂದಿ ಕಾರ್ಯಕರ್ತರು ಭಾಗಿಯಾಗಿದ್ದರು.