ಬಿಜೆಪಿ ಸಭಾತ್ಯಾಗ: ಪರಿಷತ್ ಕಲಾಪ ಮೊಟಕು

ಗುರುವಾರ, 2 ಜುಲೈ 2015 (15:50 IST)
ಲೋಕಾಯುಕ್ತರನ್ನು ಪದಚ್ಯುತಿಗೊಳಿಸಬೇಕು ಎಂಬ ಪ್ರತಿಪಕ್ಷ ಸದಸ್ಯರ ಮನವಿಗೆ ಸಿಎಂ ಸಿದ್ದರಾಮಯ್ಯ ನಕಾರ ತೋರಿದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ವಿಧಾನ ಪರಿಷತ್ ಕಲಾಪ ಅರ್ಧಕ್ಕೆ ಮೊಟಕಾದ ಸನ್ನಿವೇಶ ಕಂಡು ಬಂತು. 
 
ಕಲಾಪದಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಲೋಕಾಯುಕ್ತರನ್ನು ಸರ್ಕಾರವೇ ನೇರವಾಗಿ ಕ್ರಮ ಕೈಗೊಳ್ಳುವ ಮೂಲಕ ಪದಚ್ಯುತಿಗೊಳಿಸಬೇಕು ಎಂದು ಒತ್ತಾಯಿಸಿ ನಿಲುವಳಿ ಸೂಚನೆ ಮಂಡಿಸಿದರು. ಆದರೆ ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಲೋಕಾಯುಕ್ತರ ಪದಚ್ಯುತಿ ಬಗ್ಗೆ ನಿರ್ಣಯ ಕೈಗೊಳ್ಳಲು ಸರ್ಕಾರದ ಬಳಿ ಯಾವುದೇ ದಾಖಲೆಗಳಿಲ್ಲ. ಆದ್ದರಿಂದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದರು. ಇದಕ್ಕೆ ಕುಪಿತಗೊಂಡ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು, ಸಭಾತ್ಯಾಗ ಮಾಡಿದರು. 
 
ಬಳಿಕ, ಆಡಳಿತ ಪಕ್ಷದ ಸದಸ್ಯರೇ ಕೇಳುತ್ತಿದ್ದ ಪ್ರಶ್ನೆಗಳಿಗೆ ಸಚಿವರು ಉತ್ತರಿಸುತ್ತಿದ್ದರು. ಆದರೆ ಇದಕ್ಕೆ ತಕರಾರು ಎತ್ತಿದ್ದ ಸಭಾಪತಿ ಡಿ.ಹೆಚ್.ಶಂಕರ್ ಮೂರ್ತಿ ಅವರು ಪ್ರತಿಪಕ್ಷಗಳ ಸದಸ್ಯರಿಲ್ಲದೆ ಕಲಾಪ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಪಕ್ಷ ನಾಯಕರನ್ನು ಒಳಗೆ ಕರೆಸಿ ಎಂದು ಸಭಾಪತಿಗಳು ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.
 
ಈ ಹಿನ್ನೆಲೆಯಲ್ಲಿ ಒಳ ಆಗಮಿಸುವಂತೆ ಸಿಎಂ ಪ್ರತಿಪಕ್ಷ ಸದಸ್ಯರಿಗೆ ಮನವಿ ಮಾಡಿದರೂ ಕೂಡ ಒಳಪ್ರವೇಶಿಸಲಿಲ್ಲ. ಆದ್ದರಿಂದ ಸಭಾಪತಿಗಳು ಸದನದ ಕಾಲಪವನ್ನು ಮೊಟಕುಗೊಳಿಸಿದರು. 

ವೆಬ್ದುನಿಯಾವನ್ನು ಓದಿ