ರಾಜ್ಯದಲ್ಲಿ ಬಿಜೆಪಿಗೆ ಕನಿಷ್ಠ 18 ಸ್ಥಾನಗಳು ದೊರೆಯಲಿವೆ: ಯಡ್ಡಿ

ಭಾನುವಾರ, 4 ಮೇ 2014 (10:51 IST)
ಮೇ 16ರಂದು ಪ್ರಕಟಗೊಳ್ಳಲಿರುವ ಚುನಾವಣೆಯ ಫಲಿತಾಂಶ ಬಿಜೆಪಿ ಪರವಾಗಿ ಬರಲಿದೆ. ರಾಜ್ಯದಲ್ಲಿ 16ರಿಂದ 18 ಸ್ಥಾನಗಳನ್ನು ಪಕ್ಷ ಗಳಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
 
ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಹಾರನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,  ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ, ತಾವು ಮಂತ್ರಿಯಾಗಬೇಕೆಂಬ ಇಚ್ಚೆಯನ್ನು ಹೊಂದಿಲ್ಲ. ಮಂತ್ರಿಯಾಗುವುದಕ್ಕಿಂತ ಅವರ ನೇತೃತ್ವದಲ್ಲಿನ ಸರ್ಕಾರದಲ್ಲಿ ಸಂಸತ್‌ ಸದಸ್ಯನಾಗಿ ಕೆಲಸ ಮಾಡುವುದೇ ಹೆಮ್ಮೆಯ ಸಂಗತಿ ಎಂದು ಭಾವಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 
ಪತ್ರಕರ್ತರಿಗೆ ಬೆದರಿಕೆ ಹಾಕಿದ ಸಚಿವ ಅಭಯಚಂದ್ರ ಜೈನ್ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಟುವಾಗಿ ಟೀಕಿಸಿದರು. ಪತ್ರಕರ್ತರಿಗೆ ಧಮಕಿ ಹಾಕುವುದು ಪ್ರಜಾತಂತ್ರ ವ್ಯವಸ್ಥೆ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಕಗ್ಗೊಲೆಯಾಗಿದೆ. ಸಚಿವರ ಇಂತಹ ವರ್ತನೆ ಅಕ್ಷಮ್ಯ. ಸಚಿವ ಜೈನ್ ಕೂಡಲೇ ಮಾಧ್ಯಮ ಮಿತ್ರರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ ಅವರು ರಾಜಕಾರಣಿಗಳಿಗೆ ಇಂತಹ ಪರಿಸ್ಥಿತಿಗಳು ನಿರ್ಮಾಣವಾಗಿರುವುದು ಸಹಜ. ಆದರೆ ಇಂತಹ ವರ್ತನೆ ಯಾವುದೇ ವ್ಯಕ್ತಿಗೆ ಯಾರಿಗೂ ಶೋಭೆ ತರುವುದಿಲ್ಲ ಎಂದರು.

ವೆಬ್ದುನಿಯಾವನ್ನು ಓದಿ