ಗಡಿ ವಿವಾದ ಸಿದ್ದರಾಮಯ್ಯ ನೇತೃತ್ವದ ಸರಕಾರ ಗಂಭೀರವಾಗಿ ಪರಿಗಣಿಸಲಿ: ಪುಟ್ಟಪ್ಪ

ಮಂಗಳವಾರ, 30 ಸೆಪ್ಟಂಬರ್ 2014 (15:32 IST)
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸುತ್ತಲಿರುವ ಬುದ್ಧಿಜೀವಿಗಳನ್ನು ಲೇವಡಿ ಮಾಡಿರುವ ಹಿರಿಯ ಪತ್ರಕರ್ತ ನಾಡೋಜ ಪಾಟೀಲ ಪುಟ್ಟಪ್ಪ. ಇದೇ ಪರಿಸ್ಥಿತಿ ಮುಂದವರಿದರೆ ರೋಮ್ ಸಾಮ್ರಾಜ್ಯಕ್ಕೆ ಬೆಂಕಿ ಬಿದ್ದಾಗ ರಾಜನು ಪಿಟೀಲು ನುಡಿಸಿದಂತೆ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
 
ಬೆಳಗಾವಿ ಗಡಿ ಹೋರಾಟದಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಳೆದ 3 ದಿನದಿಂದ ಬೆಂಗಳೂರಿನಲ್ಲಿದ್ದರೂ ಗಡಿ ವಿವಾದ ಕುರಿತಂತೆ ನನ್ನೊಂದಿಗೆ ಚರ್ಚಿಸುವ ಆಸಕ್ತಿ ತೋರಿಲ್ಲ.
 
ಮೊದಲು ಅನಂತಮೂರ್ತಿ ಇದ್ದರು. ಈಗ ಮರುಳಸಿದ್ಧಪ್ಪ, ಬರಗೂರು ರಾಮಚಂದ್ರಪ್ಪ ಹಾಗೂ ಗೋವಿಂದ ರಾವ್ ಇದ್ದಾರೆ. ನಾವೆಲ್ಲ ಅವರಷ್ಟು ಬುದ್ಧಿಜೀವಿಗಳಲ್ಲ. ಈ ಹಿನ್ನೆಲೆಯಲ್ಲಿ ಮಾತನಾಡುವ ಅವಶ್ಯಕತೆ ಮುಖ್ಯಮಂತ್ರಿಗೆ ಇರದಿರಬಹುದು. ಇದೇ ಕಾರಣದಿಂದ ಗಡಿ ವಿವಾದವನ್ನು ಹಗುರವಾಗಿ ಪರಿಗಣಿಸಾಲಿಗಿದೆ ಎಂದು ಬೇಸರಿಸಿದರು.
 
ಗಡಿ ವಿವಾದ ಹಾಗೂ ರಾಜ್ಯ ಒಡೆಯುವ ಕುರಿತಂತೆ ದಿನಕ್ಕೊಬ್ಬರು ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಯಾವುದನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಮತ್ತೊಂದೆಡೆ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ಕಾನೂನು ಹೋರಾಟ ನಡೆಸುವಲ್ಲಿ ವಿಫಲರಾಗಿದ್ದೇವೆ. ಪರಿಣಾಮವಾಗಿ ಗಡಿ ತಂಟೆ ಕುರಿತಂತೆ ಮತ್ತೊಂದು ಸಮಿತಿ ರಚನೆಯಾಗುತ್ತಿದೆ.
 
ಮುಖ್ಯಮಂತ್ರಿಯವರು ಕಾನೂನು ನಮ್ಮ ಪರವಾಗಿದೆ, ಗೆಲವು ನಮ್ಮದೇ ಎನ್ನುತ್ತಾರೆ. ಆದರೆ ಗೆಲವು ನಮ್ಮದಾಗಲೂ ಕೋರ್ಟ್‌ನಲ್ಲಿ ವಾದ ಮಂಡಿಸಬೇಕಾಗುತ್ತದೆ. ಕರ್ನಾಟಕದ ಅಹವಾಲುಗಳನ್ನು ಕೋರ್ಟ್‌ಗೆ ಮನವರಿಕೆ ಮಾಡಿಕೊಡದೆ ಗೆಲವು ನಮ್ಮದು ಎಂದರೆ ಪ್ರಯೋಜನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ