ಬಜೆಟ್ ರೈತ ವಿರೋಧಿ, ಉದ್ಯಮಿಗಳ ಪರವಾಗಿದೆ: ಸಿದ್ದು ಕಿಡಿ

ಶನಿವಾರ, 28 ಫೆಬ್ರವರಿ 2015 (16:32 IST)
ಕೇಂದ್ರ ಸರ್ಕಾರ ರೈತರ ಮೇಲೆ ದಯೆ ತೋರಿಲ್ಲ, ಕೇಂದ್ರದ ಇಂದಿನ ಬಜೆಟ್ ರೈತ ವಿರೋಧಿಯಾಗಿದ್ದು, ಸಂಪೂರ್ಣವಾಗಿ ಉದ್ಯಮಿಗಳ ಪರವಾಗಿ ಬಜೆಟ್ ಮಂಡನೆ ಮಾಡಿ ರೈತರಿಗೆ ಮೋಸ ಎಸಗಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಣನೀಯವಾಗಿ ಕುಸಿದಿದ್ದು, ಬ್ಯಾರೆಲ್‌ವೊಂದಕ್ಕೆ ಶೇ.50ರಷ್ಟು ಕುಸಿತ ಕಂಡಿತ್ತು. ಅಲ್ಲದೆ ಹಣದುಬ್ಬರವೂ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಉತ್ತಮ ಬಜೆಟ್‌ನ್ನು ಮಂಡಿಸಬಹುದಿತ್ತು. ಆದರೆ ಕೇವಲ ಒಂದು ವರ್ಗವನ್ನು ಮಾತ್ರ ಪರಿಗಣಿಸಿರುವ ಸರ್ಕಾರ ರೈತರಿಗೆ ಮೋಸ ಮಾಡಿದೆ. 
 
ಸರ್ಕಾರ ಬೆಲೆ ಕಡಿಮೆಯಾದ ಈ ಸಂಧರ್ಭದಲ್ಲಿ ಒಳ್ಳೆಯ ಆಯವ್ಯಯವನ್ನು ಮಂಡಿಸಬಹುದಿತ್ತು. ಆದರೆ ಕೇಂದ್ರದ ಈ ಬಜೆಟ್ ನನಗೆ ಅತೃಪ್ತಿ ತಂದಿದೆ ಎಂದರು. 
 
ಇನ್ನು ಬಜೆಟ್ ಬಗ್ಗೆ ರೈತಪರ ಹೋರಾಟಗಾರ ಕುರುಬೂರು ಶಾಂತ ಕುಮಾರ್ ಪ್ರತಿಕ್ರಿಯಿಸಿದ್ದು, ಸರ್ಕಾರ ಹಲವು ಸಬ್ಸಿಡಿಗಳನ್ನು ಕೊಟ್ಟಿದ್ದು, ಉತ್ತಮ ಬಜೆಟ್ ಮಂಡನೆಯಾಗಬಹುದೆಂಬ ನಿರೇಕ್ಷೆಯನ್ನು ಹೊಂದಿದ್ದೆ. ಆದರೆ ಬಿಜೆಪಿ ತನ್ನ ಬಜೆಟ್ ಮಂಡನೆ ಮೂಲಕ ಕೇವಲ ವರ್ತಕರ ಪರವಾದ ಪಕ್ಷ ಎಂಬುದಾಗಿ ಸಾಬೀತುಪಡಿಸಿದೆ. 
 
ಅಲ್ಲದೆ ಚುನಾವಣೆಗೂ ಮುನ್ನ ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿದ್ದ ಸರ್ಕಾರ, ವರದಿಯನ್ನು ಕೈ ಬಿಟ್ಟಿದೆ. ಕೇವಲ ಕಾರ್ಪೊರೇಟ್ ವಲಯಕ್ಕೆ ಮಾತ್ರ ಸೀಮಿತವಾಗಿರುವ ಈ ಬಜೆಟ್ ರೈತರ ವಿರೋಧಿ ಆಯವ್ಯಯವಾಗಿದೆ. ಎಂದು ಬೇಸರ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ