ವಾಟಾಳ್ ನೇತೃತ್ವದಲ್ಲಿ ಸೆ.26ಕ್ಕೆ ರಾಜ್ಯಾದ್ಯಂತ ಬಂದ್

ಶುಕ್ರವಾರ, 4 ಸೆಪ್ಟಂಬರ್ 2015 (14:45 IST)
ಕಳಸಾ ಬಂಡೂರಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಸೆ.26ರಂದು ಬಂದ್ ಘೋಷಿಸಲಾಗುವುದು ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಇಂದು ತಿಳಿಸಿದ್ದಾರೆ. 
 
ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ 26ರಂದು ರಾಜ್ಯಾದ್ಯಂತ ಬಂದ್ ನಡೆಸಲಿದ್ದೇವೆ. ಅಂದು ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆ ವರೆಗೆ ಬಂದ್ ನಡೆಯಲಿದ್ದು, ಇದಕ್ಕೆ ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಷಣ್ಮುಗಪ್ಪ ಮತ್ತು ಕನ್ನಡಪರ ಸಂಘಟನೆಗಳು ಹಾಗೂ ರಾಜ್ಯದ ಎಲ್ಲಾ ಟ್ಯಾಕ್ಸಿ ಹಾಗೂ ಲಾರಿ ಮಾಲೀಕರ ಸಂಘಗಳು ಬೆಂಬಲಿಸಲಿವೆ ಎಂದರು. 
 
ಇದೇ ವೇಳೆ ನಾಳೆ ಕುರುಬೂರು ಶಾಂತ ಕುಮಾರ್ ನೇತೃತ್ವದಲ್ಲಿ ಘೋಷಿಸಲಾಗಿರುವ ಬಂದ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು, ಲಾರಿ ಮತ್ತು ಟ್ಯಾಕ್ಸಿ ಮಾಲೀಕರ ಸಂಘಗಳು ನಾಳೆಯ ಬಂದ್ ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

ವೆಬ್ದುನಿಯಾವನ್ನು ಓದಿ