ಪ್ರತಿಕೃತಿ ದಹನ: ರೈತನ ಪಂಚೆಗೆ ಭಗ್ಗನೆ ಹೊತ್ತಿಕೊಂಡ ಬೆಂಕಿ
ಶನಿವಾರ, 25 ಅಕ್ಟೋಬರ್ 2014 (17:42 IST)
ರೈತರ ವಿದ್ಯುತ್ ಬಿಲ್ ಹೆಚ್ಚಳವನ್ನು ತಗ್ಗಿಸಬೇಕು, ಬೆಳೆ ಹಾನಿ ಪರಿಹಾರ ನೀಡಬೇಕು ಮುಂತಾದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೀದರ್ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದ ರೈತರು ಪ್ರತಿಭಟನೆ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ಪ್ರತಿಕೃತಿಯನ್ನು ಮಲಗಿಸಿ ಶವಯಾತ್ರೆಯನ್ನು ನಡೆಸುತ್ತಿದ್ದ ರೈತರು ಅದಕ್ಕೆ ಅಂತ್ಯಕ್ರಿಯೆ ಸಲುವಾಗಿ ಪೆಟ್ರೋಲ್ ಸುರಿದ ಕೂಡಲೇ ಇದ್ದಕ್ಕಿದ್ದಂತೆ ಭಗ್ಗನೇ ಹೊತ್ತಿಕೊಂಡ ಬೆಂಕಿ ರೈತನೊಬ್ಬನ ಬಟ್ಟೆಗೆ ತಗುಲಿ ಅವಘಢ ಸಂಭವಿಸಿದ ಘಟನೆ ನಡೆಯಿತು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮಾಡುವಾಗ ಪ್ರತಿಕೃತಿ ದಹನ ಸಂದರ್ಭದಲ್ಲಿ ಗಾಳಿಗೆ ಬೆಂಕಿ ಭಗ್ಗನೇ ವ್ಯಾಪಿಸಿದ್ದರಿಂದ ಸಿದ್ರಾಮ ಎಂಬ ವ್ಯಕ್ತಿಯ ಪಂಚೆಗೆ ಬೆಂಕಿ ಹೊತ್ತಿಕೊಂಡಿತು. ಬೆಂಕಿಯನ್ನು ಗ್ರಾಮಸ್ಥರು ಹರಸಾಹಸದಿಂದ ನಂದಿಸಿದರು.