ಭಗ್ನಪ್ರೇಮಿ ಆತ್ಮಹತ್ಯೆ: ತಪ್ಪೊಪ್ಪಿಕೊಂಡ ಅತ್ತಿಗೆ

ಶುಕ್ರವಾರ, 13 ಮೇ 2016 (17:09 IST)
ಮೈದುನನ್ನು ವಂಚಿಸಿ ಆತನ ಸಾವಿಗೆ ಕಾರಣಳಾದ ಅತ್ತಿಗೆ ತಪ್ಪೊಪ್ಪಿಕೊಂಡಿದ್ದಾಳೆ. ಮೃತನ ಅತ್ತಿಗೆ  ದಿವ್ಯಾಳನ್ನು ಬಂಧಿಸಿರುವ ಪೆನ್ಸನ್ ಮೊಹಲ್ಲಾ ಪೊಲೀಸರು ವಿಚಾರಣೆಗೊಳಪಡಿಸಿದ್ದು ಅನು ಎಂಬ ಹೆಸರಿನಲ್ಲಿ ಮೈದುನನ ಜತೆ ಪ್ರೀತಿಯ ನಾಟಕವಾಡಿದ್ದು ನಾನೇ ಎಂದಾಕೆ ಹೇಳಿದ್ದಾಳೆ.
 
ನನ್ನ ಪತಿ ರಾಮಕೃಷ್ಣ ಕಳೆದೊಂದು ವರ್ಷದಿಂದ ನನ್ನಿಂದ ದೂರವಾಗಿದ್ದ. ಒಂಟಿಯಾಗಿದ್ದ ನನಗೆ ಫ್ರೆಂಡ್ಸ್ ಬೇಕಾಗಿತ್ತು. ಹೀಗಾಗಿ  ಅನು ಎಂಬ ಹೆಸರಿನಲ್ಲಿ ರಾಘವೇಂದ್ರನ ಜತೆ ಮಾತನ್ನಾಡುತ್ತಿದ್ದೆ. ಆತ ಆತ್ಮಹತ್ಯೆ ಮಾಡಿಕೊಳ್ಳಲಿ ಎಂಬ ಉದ್ದೇಶ ನನಗಿರಲಿಲ್ಲ ಎಂದಾಕೆ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟಿದ್ದಾಳೆ. 
 
ರಾಘವೇಂದ್ರನ ಅಣ್ಣ ರಾಮಕೃಷ್ಣ ಆಕೆಯ ಎರಡನೇ ಪತಿಯಾಗಿದ್ದಾನೆ. ಮೊದಲ ಮದುವೆ ಸಂಗತಿಯನ್ನು ಮುಚ್ಚಿಟ್ಟಿದ್ದರಿಂದ ಪತಿ ರಾಮಕೃಷ್ಣ ನನ್ನನ್ನು ದೂರ ಮಾಡಿದ್ದ ಎಂಬುದು ತಿಳಿದು ಬಂದಿದೆ. 
 
ಕಳೆದ ಮೇ 7 ರಂದು  ಹಾಸನ ಉತ್ತರ ಬಡಾವಣೆಯಲ್ಲಿ ಕ್ಯಾಬ್ ಮಾಲೀಕ ರಾಘವೇಂದ್ರ ಆತ್ಮಹತ್ಯೆಗೆ ಶರಣಾಗಿದ್ದ.
 
ಕ್ಯಾಬ್ ಮಾಲೀಕನಾಗಿದ್ದ ರಾಘವೇಂದ್ರನಿಗೆ ಫೋನ್‌ನಲ್ಲಿ ಯುವತಿಯೋರ್ವಳ ಪರಿಚಯವಾಗಿತ್ತು. ತನ್ನ ಹೆಸರು ಅನು, ಕಾಲೇಜು ಉಪನ್ಯಾಸಕಿ ಎಂದು ಪರಿಚಯಿಸಿಕೊಂಡಿದ್ದ ಆಕೆ ಫೇಸ್‌ಬುಕ್‌ನಲ್ಲಿ ತಮಿಳು ನಟಿ ಮೋನಲ್ ಪೋಟೋವನ್ನು ಹಾಕಿ ಅದು ತನ್ನ ಫೋಟೋ ಎಂದು ನಂಬಿಸಿದ್ದಳು. ಕಳೆದ 7 ತಿಂಗಳಿಂದ ಅವರಿಬ್ಬರು ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಆದರೆ ಒಂದು ದಿನವೂ ಭೇಟಿಯಾಗಿರಲಿಲ್ಲ.
 
ಕಳೆದ ಒಂದು ತಿಂಗಳ ಹಿಂದೆ ಯುವತಿ ಮದುವೆಗೆ ತನ್ನ ಅಣ್ಣ ಅಡ್ಡಿಯಾಗಿದ್ದಾನೆ. ನಿನ್ನ ಜತೆ ಮದುವೆಯಾಗಲು ಸಾಧ್ಯವಿಲ್ಲ ಎಂದು ಯುವತಿ ತಿಳಿಸಿದ್ದಾಳೆ. ಇದರಿಂದ ಖಿನ್ನನಾದ ರಾಘವೇಂದ್ರ ಕಳೆದ ವಾರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ಅದರಲ್ಲಿ ತನ್ನ ಪ್ರೇಮಿಯ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಆದರೆ ಆಕೆ ತನ್ನ ಅತ್ತಿಗೆಯಿದ ಪರಿಚಯವಾಗಿದ್ದಳು ಎಂದು ಹೇಳಿದ್ದ. ಹೀಗಾಗಿ ಪೊಲೀಸರಿಗೆ ಈ ಪ್ರಕರಣ ಬಿಡಿಸಲಾಗದ ಒಗ್ಗಟ್ಟಾಗಿ ಪರಿಣಮಿಸಿತ್ತು. 
 
ಆದರೆ ಈಗ ದಂಗು ಬಡಿಸುವ ಸತ್ಯವೊಂದು ಬಯಲಾಗಿದೆ. ಆತನ ಸ್ವಂತ ಅಣ್ಣನ ಪತ್ನಿಯೇ ಡಬಲ್ ಗೇಮ್ ಆಡಿ, ಅಮಾಯಕನ ಸಾವಿಗೆ ಕಾರಣಳಾಗಿದ್ದಾಳೆ ಎಂದು ತಿಳಿದು ಬಂದಿದೆ. 
 
ರಾಘವೇಂದ್ರನ ಅತ್ತಿಗೆ ದಿವ್ಯಾ ಕಳೆದ ಕೆಲ ವರ್ಷಗಳ ಹಿಂದೆ ಪತಿಯಿಂದ ದೂರವಾಗಿ ವಾಸಿಸುತ್ತಿದ್ದು, ಮೈದುನ ಸತ್ತ ದಿನ ಗಂಡನ ಮನೆಗೆ ಬಂದು ಶೋಕದ ನಾಟಕವಾಡಿದ್ದಳು. ಮರುದಿನ ಆಕೆ ರಾಘವೇಂದ್ರ ಪ್ರೀತಿಸಿದ ಹುಡುಗಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳಂತೆ. ತನಗೆ ಫೋನ್ ಬಂದಿತ್ತು ಎಂದು ತನ್ನ ಸಂಬಂಧಿಕರ ಬಳಿ ಹೇಳಿಕೊಂಡಿದ್ದಳು. ಅವಳು ಯಾರು ಎಂದು ಕೇಳಿದರೆ ಮಾಹಿತಿ ನೀಡಲು ನಿರಾಕರಿಸಿ ಕುಂಟು ನೆಪ ಹೇಳಿದ್ದಳು. ಆ ದಿನ ಸಂಜೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳಂತೆ ಎಂದು ಹೇಳುವುದರ ಮೂಲಕ ಆಕೆ ಮತ್ತೊಂದು ಬಾಂಬ್ ಸಿಡಿಸಿದ್ದಳು. ಈ ಕುರಿತು ಪೊಲೀಸರಿಗೆ ವಿಚಾರಿಸಿದಾಗ ರಾಘವೇಂದ್ರ ಸತ್ತನೆಂಬ ಕಾರಣಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಯಾವ ಸಂಗತಿಯೂ ಬೆಳಕಿಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಎಲ್ಲರ ಅನುಮಾನ ಬಲವಾಗಿದೆ. ಆದರೆ ಆ ಕುರಿತು ಯಾವ ದಾಖಲೆಯೂ ಇರಲಿಲ್ಲ
 
ಬಳಿಕ ರಾಘವೇಂದ್ರ ಡೆತ್ ನೋಟ್‌ನಲ್ಲಿ ಬರೆದಿದ್ದ ಎರಡು ಫೋನ್ ನಂಬರ್ ಪರಿಶೀಲಿಸಿದಾಗ ಅವೆರಡು ಆತನ ಅತ್ತಿಗೆ ದಿವ್ಯಾಳದ್ದೇ ಎಂಬ ದಂಗು ಬಡಿಸುವ ಸತ್ಯ ಹೊರಬಿದ್ದಿದೆ. ಅತ್ತಿಗೆ ದಿವ್ಯಾಳೇ ಮೈದುನನ ಜತೆ ಪ್ರೇಮದ ನಾಟಕವಾಡಿದ್ದಳು ಎಂದು ಹೇಳಲಾಗುತ್ತಿದೆ. ಆಕೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
 
ಒಟ್ಟಿನಲ್ಲಿ ಅತ್ತಿಗೆ ಡಬಲ್ ಗೇಮ್ ಮೈದುನನ ಸಾವಿಗೆ ಕಾರಣವಾಗಿರುವುದು ವಿಪರ್ಯಾಸ.

ವೆಬ್ದುನಿಯಾವನ್ನು ಓದಿ