ಮರಕ್ಕೆ ಕಾರು ಡಿಕ್ಕಿ: ಬಿಜೆಪಿ ಮುಖಂಡ ಸೇರಿ ಮೂವರ ಸಾವು

ಮಂಗಳವಾರ, 1 ಡಿಸೆಂಬರ್ 2015 (13:02 IST)
ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ದುರ್ಮರಣವಪ್ಪಿದ ಘಟನೆ ನಡೆದಿದೆ.  ಮೃತರು ಬೆಳಗಾವಿಯ ಬಿಜೆಪಿ ಮುಖಂಡ ಮಹಾಂತೇಶ್ ಅಂಗಡಿ, ಸದಾನಂದ ಹಿರೇಮಠ ಮತ್ತು ಬಸವರಾಜ್‌ ಅಂಗಡಿ ಎಂದು ಗುರುತಿಸಲಾಗಿದೆ.  ಧರ್ಮಸ್ಥಳದಿಂದ ಬೆಳಗಾವಿಗೆ ವಾಪಸ್ ಆಗುವಾಗ ಮಂಗಳವಾರ ಮುಂಜಾನೆ  ಈ ಅಪಘಾತ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗೋಕಾಕ್ ತಾಲೂಕಿನವರಾದ ಮಹಾಂತೇಶ್ ಅಂಗಡಿ ಬಿಜೆಪಿ ಮುಖಂಡರಾಗಿದ್ದರು ಮತ್ತು ಸ್ಥಿರಾಸ್ತಿ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು.  ಮುಂಜಾನೆ ಮೂರು ಗಂಟೆಗೆ ಮರಕ್ಕೆ ಕಾರು ಡಿಕ್ಕಿಹೊಡೆದಿದ್ದರೂ ಬೆಳಿಗ್ಗೆ 5 ಗಂಟೆವರೆಗೆ ಯಾರ ಗಮನಕ್ಕೂ ಬಂದಿರಲಿಲ್ಲ.

ನಂದಗಡ ಪೊಲೀಸ್ ಠಾಣೆಗೆ ವಾಹನಸವಾರರೊಬ್ಬರು ಮಾಹಿತಿ ನೀಡಿದಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದಾಗ ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. 

ವೆಬ್ದುನಿಯಾವನ್ನು ಓದಿ