ಗೋಸ್ವಾಮಿ ರಾಘವೇಶ್ವರ ಭಾರತಿಯವರ ಮೇಲೆ ದೂರು ದಾಖಲು

ಬುಧವಾರ, 27 ಆಗಸ್ಟ್ 2014 (09:40 IST)
ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರ ವಿರುದ್ಧ ದಂಪತಿಗಳಿಬ್ಬರು ಬೆದರಿಕೆ ಆರೋಪ ಮಾಡಿದ್ದು, ಬೆಂಗಳೂರಿನ ಬನಶಂಕರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಸ್ವಾಮೀಜಿಗಳ ಶಿಷ್ಯರು ಕೂಡ ಪ್ರತಿ ದೂರನ್ನು  ದಾಖಲಿಸಿದ್ದಾರೆ. 
 
ಯಾವ ಕಾರಣಕ್ಕೆ ದೂರು ದಾಖಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಕುಮಟಾ ನಗರದಲ್ಲಿ ನಡೆಯುತ್ತಿರುವ  ರಾಮಕಥಾ ಕಾರ್ಯಕ್ರಮಕ್ಕೆ ಕಲಾವಿದರು ಭಾಗವಹಿಸಬಾರದು ಎಂದು  ಮಠದಿಂದ ಬೆದರಿಕೆ ಬಂದಿದೆ ಎಂದು  ದೂರು ದಾಖಲಾಗಿದೆ ಎಂದು ಕೆಲವು ಮೂಲಗಳು ಹೇಳಿದರೆ, ಶ್ರೀಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆಪಾದಿಸಲಾಗಿದೆ ಎಂದು ಹೇಳಲಾಗುತ್ತಿದೆ. 
 
ಕೇವಲ ಬೆಂಗಳೂರು ಮಾತ್ರವಲ್ಲದೇ, ಉತ್ತರಕನ್ನಡದ ಹೊನ್ನಾವರ,  ದಕ್ಷಿಣ ಕನ್ನಡದ ಸುಳ್ಯದಲ್ಲಿಯೂ ಬೇರೆ ಬೇರೆಯವರಿಂದ  ರಾಘವೇಶ್ವರರ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.
 
ಹೊನ್ನಾವರ ಪೋಲಿಸ್ ಠಾಣೆ ಹಾಜರಾಗಿರುವು ಸ್ವಾಮೀಜಿ ತಮ್ಮ ಮಠದಿಂದ ಯಾರಿಗೂ ಬೆದರಿಕೆ ಕರೆ ಮಾಡಿಲ್ಲ.ಇದರಲ್ಲಿ ತಮ್ಮದೇನೂ ತಪ್ಪಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಮಾಹಿತಿ ಲಭಿಸಿದೆ. 
 
ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಸ್ವಾಮೀಜಿ  ಗೋರಕ್ಷಣೆ ಮತ್ತು  ಗಿಡಮೂಲಿಕೆಗಳ ಔಷಧ ತಯಾರಿಕೆಗೆ ಉತ್ತೇಜನ ನೀಡುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆ ಮೊದಲು ಕೂಡ ಅವರ ಮೇಲೆ ಬೆದರಿಕೆ ಆರೋಪದ ಪ್ರಕರಣ ದಾಖಲಾಗಿತ್ತು. ನಂತರ ಅದು ಕೇವಲ ಸ್ವಾಮೀಜಿಯವರ ತೇಜೋವಧೆಗೆ ಮಾಡಿದ ಸುಳ್ಳು ಆರೋಪ ಎಂದು ತಿಳಿದುಬಂದಿತ್ತು.
 
ಹೆಚ್ಚುತ್ತಿರುವ  ಸ್ವಾಮೀಜಿ ಮತ್ತು ಮಠದ  ಘನತೆ, ಜನಪ್ರಿಯತೆಗೆ ಕುಂದು ತರುವ ಕುತಂತ್ರ ಹೆಣೆದು ಈ ಗೊಂದಲಮಯ ಆಪಾದನೆ ಮಾಡಲಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. 

ವೆಬ್ದುನಿಯಾವನ್ನು ಓದಿ