ವಿಧಾನಸಭೆಯಲ್ಲಿ ಸಿಇಟಿ ಅಕ್ರಮಗಳ ಬಗ್ಗೆ ಚರ್ಚೆ ನಡೆದು ಸರ್ಕಾರದ ಉತ್ತರಕ್ಕೆ ತೃಪ್ತರಾಗದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ನಡೆಯಿತು. ಸೀಟ್ ಬ್ಲಾಕಿಂಗ್ ಮಾಡುವ ಕುಳಗಳು ರಾಜಕಾರಣಿಗಳು ಎಂದು ಅರವಿಂದ ಲಿಂಬಾವಳಿ ವಿಷಯ ಪ್ರಸ್ತಾಪಿಸಿದರು.
ಖಾಸಗಿ ಕಾಲೇಜುಗಳು ಅತಿ ಹೆಚ್ಚು ಲಾಭ ಮಾಡಿಕೊಂಡಿವೆ. ಆನ್ ಲೈನ್ ದಾಖಲಾತಿ ವ್ಯವಸ್ಥೆ ಸರಿಪಡಿಸಬೇಕು ಎಂದು ಲಿಂಬಾವಳಿ ಹೇಳಿದರು. ಸರ್ಕಾರಿ ಕೋಟಾದ 609 ಸೀಟುಗಳು ವಾಪಸಾಗಿವೆ. ವಿದ್ಯಾರ್ಥಿಗಳು ವಾಪಸ್ ನೀಡಿರುವ ಸೀಟುಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಲಿಂಬಾವಳಿ ಒತ್ತಾಯಿಸಿದರು.
ಲಿಂಬಾವಳಿ ಮಾತಿಗೆ ಶಾಸಕ ಸಿ.ಟಿ.ರವಿ ದನಿಗೂಡಿಸಿದರು. 2006ರ ಕಾಯ್ದೆಯನ್ನು ತಿದ್ದುಪಡಿಯೊಂದಿಗೆ ಜಾರಿ ಮಾಡಿ ಎಂದು ಅವರು ಒತ್ತಾಯಿಸಿದರು. ಸಿಇಟಿ ಅಕ್ರಮದಲ್ಲಿ 500ರಿಂದ 600 ಕೋಟಿ ಲಾಭವಾಗಿದೆ ಎಂದು ಲಿಂಬಾವಳಿ ಹೇಳಿದರು. ಸರ್ಕಾರದ ಉತ್ತರಕ್ಕೆ ಅಸಮಾಧಾನಗೊಂಡ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.