ಶಾಲೆಯಲ್ಲಿ 100 ರೂ. ಕದ್ದ ಆರೋಪ; ಆತ್ಮಹತ್ಯೆ ಮಾಡಿಕೊಂಡ ಬಾಲಕ

ಗುರುವಾರ, 16 ಫೆಬ್ರವರಿ 2017 (14:13 IST)
ಶಾಲೆಯಲ್ಲಿ ಕಳ್ಳತನದ ಆರೋಪ ಹೊರಿಸಿದರೆಂದು ನೊಂದ 13 ವರ್ಷದ ಬಾಲಕ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಹೃದಯವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತ ಪವನ್, ಭೈರವೇಶ್ನರ ನಗರದ ಖಾಸಗಿ ಶಾಲೆಯೊಂದರಲ್ಲಿ  7ನೇ ತರಗತಿ ಓದುತ್ತಿದ್ದ.
 
ಬುಧವಾರ ಬಾಲಕನ ತರಗತಿಯಲ್ಲಿ ವಿದ್ಯಾರ್ಥಿಯೋರ್ವ 100 ರೂಪಾಯಿ ಕಳೆದುಕೊಂಡಿದ್ದ. ಸಹಪಾಠಿಗಳಲ್ಲೇ ಯಾರಾದರೂ ಕದ್ದರೆಂಬ ಅನುಮಾನದಲ್ಲಿ ಶಿಕ್ಷಕಿ 17 ವಿದ್ಯಾರ್ಥಿಗಳ ಬ್ಯಾಗ್ ತಪಾಸಣೆ ನಡೆಸಿದ್ದರು. ಆಗ ಪವನ್ ಬ್ಯಾಗ್‌ನಲ್ಲಿ 80 ರೂ ಸಿಕ್ಕಿತ್ತು. ಆತನೇ ಕದ್ದಿದ್ದಾನೆ ಎಂದು ಶಿಕ್ಷಕಿ ಬುದ್ಧಿ ಮಾತು ಹೇಳಿದ್ದರು ಮತ್ತು ಆತನಲ್ಲಿದ್ದ 80ರೂಪಾಯಿಯನ್ನು ಪಡೆದುಕೊಂಡು ಕಳೆದುಕೊಂಡ ವಿದ್ಯಾರ್ಥಿಗೆ ನೀಡಿದ್ದರು.
 
ಆದರೆ ತಾನು ಹಣ ಕದ್ದಿಲ್ಲ, ಯಾರೋ ನನ್ನ ಬ್ಯಾಗ್‌ನಲ್ಲಿ ಹಾಕಿದ್ದಾರೆ ಎಂದು ಪವನ್ ಅಳುತ್ತಾ ಶಿಕ್ಷಕಿಯಲ್ಲಿ ಹೇಳಿದ್ದ.
 
ಘಟನೆಯಿಂದ ನೊಂದಿದ್ದ ಆತ ಸಂಜೆ ಮನೆಗೆ ಬಂದು ನೇಣು ಹಾಕಿಕೊಂಡಿದ್ದಾನೆ.
 
ಈ ಕುರಿತು ಪವನ್ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಾನೇ ಮಗನಿಗೆ 100 ರೂಪಾಯಿ ನೀಡಿದ್ದೆ. ಅದರಲ್ಲಿ 20ರೂಪಾಯಿ ನೋಟ್-ಬುಕ್, ಪೆನ್‌ಗೆ ಖರ್ಚು ಮಾಡಿ ಉಳಿದ ಹಣವನ್ನಾತ ಬ್ಯಾಗ್ನಲ್ಲಿಟ್ಟುಕೊಂಡಿದ್ದ. ಆದರೆ ಆತ ಹಣ ಕದ್ದಿದ್ದಾನೆ ಎಂದು ಸುಳ್ಳು ಆರೋಪ ಹೊರಿಸಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ