ಪಾಕ್‌ ಬೆಂಬಲದೊಂದಿಗೆ ಭಾರತದ ಮೇಲೆ ದಾಳಿಗೆ ಚೀನಾ ಸಜ್ಜು: ಮುಲಾಯಂ

ಬುಧವಾರ, 19 ಜುಲೈ 2017 (18:43 IST)
ಪಾಕಿಸ್ತಾನದ ಬೆಂಬಲದೊಂದಿಗೆ ಚೀನಾ ಭಾರತದ ಮೇಲೆ ಸೇನಾ ದಾಳಿ ನಡೆಸಲು ಸಜ್ಜಾಗಿದೆ. ಟಿಬೆಟ್ ವಿಷಯದ ಬಗ್ಗೆ ಭಾರತ ತನ್ನ ನಿಲುವು ಬದಲಿಸಿ ಚೀನಾಗೆ ಬೆಂಬಲಿಸಲಿ ಎಂದು ಮಾಜಿ ರಕ್ಷಣಾ ಸಚಿವ, ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಸಲಹೆ ನೀಡಿದ್ದಾರೆ.
 
ಭಾರತ- ಚೀನಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಲೋಕಸಭೆಯಲ್ಲಿ ಧ್ವನಿಯೆತ್ತಿದ ಮುಲಾಯಂ, ನೆರೆಯ ರಾಷ್ಟ್ರವಾದ ಚೀನಾದಿಂದ ಎದುರಾಗಿರುವ ಸವಾಲುಗಳನ್ನು ಹಿಮ್ಮೆಟ್ಟಿಸಲು ಸರಕಾರ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡಲಿ ಎಂದು ಕೋರಿದರು.
 
ಚೀನಾ ಪಾಕಿಸ್ತಾನದೊಂದಿಗೆ ಕೈ ಜೋಡಿಸಿ, ಭಾರತದ ಮೇಲೆ ದಾಳಿ ನಡೆಸಲು ಸಂಪೂರ್ಣ ಸಿದ್ದಗೊಂಡಿದೆ. ಭಾರತಕ್ಕೆ ಚೀನಾ ಅಪಾಯಕಾರಿ ಎಂದು ಹಲವು ವರ್ಷಗಳಿಂದ ಸರಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. 
 
ಕಾಶ್ಮಿರದಲ್ಲಿ ಪಾಕಿಸ್ತಾನದ ಬೆಂಬಲ ಪಡೆದು ಚೀನಾ ಸೇನೆ ಒಳನುಗ್ಗಲು ಪ್ರಯತ್ನಿಸುತ್ತಿದೆ. ಕೇಂದ್ರ ಸರಕಾರ ಚೀನಾ ಸೈನಿಕರನ್ನು ತಡೆಯಲು ಯಾವ ನಿರ್ಧಾರ ತೆಗೆದುಕೊಂಡಿದೆ ಎನ್ನುವುದನ್ನು ಮೋದಿ ಸರಕಾರ ಸಂಸತ್ತಿನಲ್ಲಿ ಬಹಿರಂಗಪಡಿಸಲಿ ಎಂದು ಗುಡುಗಿದರು.
 
ಭಾರತದ ಮೇಲೆ ದಾಳಿ ಮಾಡಲು ಚೀನಾ, ಭಾರತ-ಪಾಕ್ ಗಡಿಯಲ್ಲಿ ಅಣ್ವಸ್ತ್ರಗಳನ್ನು ಅಡಗಿಸಿಟ್ಟಿದೆ. ಇದು ಭಾರತೀಯ ಗುಪ್ತಚರ ಸಂಸ್ಥೆಗಳಿಗೆ ನಿಖರವಾಗಿ ಗೊತ್ತಿದೆ ಎಂದು ಹೇಳಿದ್ದಾರೆ.
 
ಚೀನಾ ನಮ್ಮ ನಿಜವಾದ ಶತ್ರುವೇ ಹೊರತು ಪಾಕಿಸ್ತಾನವಲ್ಲ. ಪಾಕಿಸ್ತಾನ ನಮಗೆ ಯಾವುದೇ ಹಾನಿ ಮಾಡಲು ಸಾಧ್ಯವಿಲ್ಲ. ಭೂತಾನ್ ರಾಷ್ಟ್ರವನ್ನು ರಕ್ಷಿಸುವುದು ಭಾರತದ ಕರ್ತವ್ಯ. ಚೀನಾ ನೇಪಾಳವನ್ನು ವಶಪಡಿಸಿಕೊಳ್ಳುವತ್ತ ಸಂಚು ರೂಪಿಸಿದೆ ಎಂದು ಮಾಜಿ ರಕ್ಷಣಾ ಸಚಿವ ಮುಲಾಯಂ ಸಿಂಗ್ ಯಾದವ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ