ಚರ್ಚೆಗೆ ಅಡ್ಡಿ ಮಾಡುತ್ತಿದ್ದ ಬಿಜೆಪಿ ಸದಸ್ಯರನ್ನು, ನಿಮಗೆ ನಾಚಿಕೆಯಾಗಬೇಕು, ಮಾನ ಮರ್ಯಾದೆಯೇನಾದರೂ ಇದೆಯಾ, ಜನ ನಿಮಗೆ ಪಾಠ ಕಲಿಸಿದ್ರೂ ಬುದ್ಧಿ ಬಂದಿಲ್ಲ ಎಂದು ಸಿಎಂ ಕಿಡಿಕಾರಿದರು. ಮೊದಲಿಗೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆಂಜನೇಯ ಪ್ರಕರಣವನ್ನು ಪ್ರಸ್ತಾಪಿಸಿ ನಿಮಗೆ ಎದೆಗಾರಿಕೆ ಇದ್ದರೆ ತಕ್ಷಣವೇ ರಾಜೀನಾಮೆ ಪಡೆಯಿರಿ ಎಂದು ಸಿಎಂಗೆ ಹೇಳಿದರು.
ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಮಾತಿನ ಚಕಮಕಿ ನಡೆದು ಬಿಜೆಪಿ ವಿರೋಧದ ನಡುವೆ, ಧಿಕ್ಕಾರಗಳ ಘೋಷಣೆ ನಡುವೆಯೂ ಕೃಷ್ಣಭೈರೇಗೌಡ ಉತ್ತರ ನೀಡುತ್ತಿದ್ದ ದೃಶ್ಯ ಕಂಡುಬಂತು. ಸದನದ ಬಾವಿಗಿಳಿದ ಪ್ರತಿಪಕ್ಷದ ಸದಸ್ಯರು ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ, ಶೇಮ್, ಶೇಮ್ ಎನ್ನುತ್ತಾ ಪ್ರತಿಭಟನೆ ನಡೆಸಿದರು. ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ ಮುಂದುವರಿಯಿತು.
ಪ್ರತಿಪಕ್ಷದ ತೀವ್ರ, ಗದ್ದಲ ಕೋಲಾಹಲಗಳ ನಡುವೆ ಕೃಷ್ಣಭೈರೇಗೌಡರ ಬರಗಾಲದ ಕುರಿತ ಉತ್ತರವು ಯಾರಿಗೂ ಕೇಳಿಸದಾಯಿತು. ಬಿಜೆಪಿ ಸದಸ್ಯರ, ಗದ್ದಲ ಕೋಲಾಹಲದ ನಡುವೆ ಹಲವು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಮಂಡಿಸಿ ಅದನ್ನು ಅಂಗೀಕರಿಸಲಾಯಿತು. ಬಳಿಕ ಸದನವನ್ನು ಮುಂದೂಡಿ ಪುನಃ 2.50ಕ್ಕೆ ಸೇರುವುದಾಗಿ ಸ್ಪೀಕರ್ ಘೋಷಿಸಿದರು.