ಸಿಎಂ ಡೈಮಂಡ್ ವಾಚ್ ಕೇಸ್‌ಗೆ ಮತ್ತೊಂದು ಟ್ವಿಸ್ಟ್

ಶುಕ್ರವಾರ, 26 ಫೆಬ್ರವರಿ 2016 (15:56 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಿದ್ದ ಡೈಮಂಡ್ ವಾಚ್ ಕೇಸ್‌ಗೆ ಮತ್ತೊಂದು ಟ್ವಿಸ್ಟ್ ದೊರೆತಿದ್ದು, ಡಾ.ಸುಧಾಕರ್ ಶೆಟ್ಟಿ ನಿವಾಸದಲ್ಲಿ ಕಳ್ಳತನವಾಗಿದ್ದ ವಾಚ್ ಇದಾಗಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. 
ಸುದ್ದಿಗೋಷ್ಠಿಯಲ್ಲಿ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ, ಡಾ. ಸುಧಾಕರ್ ಶೆಟ್ಟಿಯವರ ಆಪ್ತರು ಸಿಎಂ ಕಟ್ಟಿದ್ದ ವಾಚ್ ನೋಡಿ ಅದು ಶೆಟ್ಟಿಯವರ ವಾಚ್ ಎಂದು ಹೇಳಿದ್ದರು. ಹಾಗಾದಲ್ಲಿ ಇದು ಸಿಎಂ ಸಿದ್ದರಾಮಯ್ಯ ಕಟ್ಟಿದ್ದ ವಾಚ್ ಹಿಂದೆ ಕಳ್ಳತನವಾದ ವಾಚ್ ಎನ್ನುವ ಸಂದೇಹ ಮೂಡುತ್ತದೆ. ಆದ್ದರಿಂದ ಸಿಬಿಐ ತನಿಖೆಯಾದಲ್ಲಿ ಸತ್ಯಾಂಶ ಬಹಿರಂಗವಾಗುತ್ತದೆ ಎಂದರು.
 
ಡಾ. ಸುಧಾಕರ್ ಶೆಟ್ಟಿ ಪೊಲೀಸರಿಗೆ ದೂರು ನೀಡಿ ವಾಚ್ ಸೇರಿದಂತೆ ಹಲವು ವಸ್ತುಗಳ ಕಳ್ಳತನವಾಗಿದ್ದು, ಮನೆಯಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಆನಂದ್ ಮತ್ತು ಮಹಾಲಕ್ಷ್ಮಿ ಎನ್ನುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅವರ ವಿಚಾರಣೆ ಕೂಡಾ ನಡೆದಿತ್ತು ಎಂದು ತಿಳಿಸಿದ್ದಾರೆ.
 
ಸುಧಾಕರ್ ಶೆಟ್ಟಿಯವರ ಒಂದು ವಜ್ರಖಚಿತ ವಾಚ್,  2 ರೋಲೆಕ್ಸ್ ವಾಚ್, 1 ಶೆಪರ್ಡ್ ವಾಚ್ ಕಳ್ಳತನವಾಗಿತ್ತು.ಕಾರು ಚಾಲಕ ಆನಂದ್ ಪೂಜಾರಿ,  ಮಂಗಳೂರಿನಲ್ಲಿ ಬ್ಯೂಟಿಪಾರ್ಲರ್ ಮಾಲೀಕಳಾದ ಯಶೋಧಾ ಶೆಟ್ಟಿಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದ್ದರು.  
 
ಡಾ.ಸುಧಾಕರ್ ಶೆಟ್ಟಿಯವರನ್ನು ಸಂಪರ್ಕಿಸಿದಾಗ ಕುಮಾರ್ ಸ್ವಾಮಿ ನನ್ನನ್ನು ಸಂಪರ್ಕಿಸಿಲ್ಲ . ನಾನು ಕಳೆದುಕೊಂಡಿರುವುದು ಬೇರೆ ವಾಚ್, ತುಂಬಾ ಓಲ್ಡ್ ವಾಚ್, 10 ತಿಂಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದೇನೆ. ಕುಮಾರಸ್ವಾಮಿ ಯಾಕೆ ನನ್ನನ್ನು ಹೆಸರು ಹೇಳುತ್ತಿದ್ದಾರೆ ಗೊತ್ತಿಲ್ಲ.  
 
ಕುಮಾರಸ್ವಾಮಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಶೆಟ್ಟಿಯವರ ಕಾರು ಚಾಲಕ ಆನಂದ್ ಪೂಜಾರಿ, ಕುಮಾರಸ್ವಾಮಿಯವರು ನನ್ನನ್ನು ಸಂಪರ್ಕಿಸಿಲ್ಲ. ಅವರ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.  
 
ಮಂಗಳೂರಿನಲ್ಲಿ ಬ್ಯೂಟಿಪಾರ್ಲರ್ ಮಾಲೀಕಳಾದ ಯಶೋಧಾ ಕೂಡಾ ಪ್ರತಿಕ್ರಿಯೆ ನೀಡಿದ್ದು, ಶೆಟ್ಟಿಯವರು ನನಗೆ ತುಂಬಾ ಪರಿಚಯ. ಅವರ ಮನೆಗೆ ಆಗಾಗ ಭೇಟಿ ನೀಡುತ್ತಿದ್ದೇನೆ. ವಾಚ್ ಪ್ರಕರಣದಲ್ಲಿ ಪೊಲೀಸರು ನನ್ನ ವಿಚಾರಣೆ ನಡೆಸಿದ್ದರು. ಶೆಟ್ಟಿಯವರ ಕೈಯಲ್ಲಿದ್ದ ವಾಚ್ ನಾನು ನೋಡಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ