ಕಲಾಂ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಮಂಗಳವಾರ, 28 ಜುಲೈ 2015 (11:51 IST)
ಪಾಠ ಮಾಡುತ್ತಲೇ ಕೊನೆಯುಸಿರೆಳೆದಿದ್ದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪುರಸ್ಕೃತ, ಖ್ಯಾತ ವಿಜ್ಞಾನಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಅಸುನೀಗಿರುವ ಹಿನ್ನೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಅಸಮಾನ್ಯ ವಿಜ್ಞಾನಿ, ಸ್ಫೂರ್ತಿದಾಯಕ ಚಿಲುಮೆ, ಮಕ್ಕಳ ಮುದ್ದಿನ ತಾತ ಕಣ್ಮರೆಯಾಗಿರುವುದು ಭಾರತ ದೇಶಕ್ಕೆ ತುಂಬಾಲಾಗದ ನಷ್ಟವಾಗಿದೆ ಎಂದು ಹೇಳುವ ಮೂಲಕ ಸಂತಾಪ ಸೂಚಿಸಿದರು.  
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಬ್ದುಲ್ ಕಲಾಂ ಅವರು ಅಸುನೀಗಿರುವ ಸಂಗತಿ ಮನಸ್ಸಿಗೆ ನೋವನ್ನುಂಟು ಮಾಡಿದೆ. ರಾಷ್ಟ್ರದ ಪ್ರಥಮ ಪ್ರಜೆಯಾಗಿ ಉತ್ತಮ ಸೇವೆ ಹಾಗೂ ಕ್ರಿಯಾಶೀಲತೆ ಮೂಲಕ ಮನೆ ಮಾತಾಗಿದ್ದ ಕಲಾಂ ಅವರು ನಮ್ಮನ್ನಗಲಿರುವುದು ದೇಶಕ್ಕೇ ತುಂಬಲಾರದ ನಷ್ಟ ಎಂದರು. 
 
ಇದೇ ವೇಳೆ, ಯುವ ಸಮುದಾಯದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದ ಅವರಿಗೆ ಇಡೀ ದೇಶವೇ ಅವರಿಗೆ ಕುಟುಂಬವಾಗಿತ್ತು. ಬಡ ಕುಟುಂಬದಲ್ಲಿ ಹುಟ್ಟಿ, ಪತ್ರಿಕೆಗಳನ್ನು ಹಂಚಿ, ಸೀಮೆ ಎಣ್ಣೆ ಬುಡ್ಡಿ ಇಟ್ಟುಕೊಂಡು ಓದಿದ ಅವರು ಬಡತನದಲ್ಲಿಯೇ ಬೆಳೆದು ಖ್ಯಾತ ವಿಜ್ಞಾನಿಯಾಗಿ ಖ್ಯಾತಿ ಗಳಿಸಿದರು. ಬಳಿಕ ರಾಜೇಂದ್ರ ಪ್ರಸಾದ್ ಅವರ ನಂತರ ರಾಷ್ಟ್ರದ ರಾಷ್ಟ್ರಪತಿಯಾಗಿ ಉತ್ತಮ ಸೇವೆ ಸಲ್ಲಿಸಿ ಜನತೆಯ ಮನದಲ್ಲಿ ಮನೆ ಮಾಡಿದವರು.  
 
ಅವರು ದೇಶದ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದ್ದು, ಸದಾ ಆಶಾವಾದಿ ನಾಯಕರಾಗಿದ್ದವರು. ದೇಶದ ಭವಿಷ್ಯದ ಬಗ್ಗೆ ಯಾವಾಗಲೂ ಕ್ರಿಯಾಶೀಲರಾಗಿದ್ದ ಅವರು, ಮಕ್ಕಳು ಮತ್ತು ಯುವಕರ ಬಗ್ಗೆ ಅಗಾಧ ಆಶಾ ಭಾವನೆಯನ್ನು ಹೊಂದಿದ್ದರು. ಯಾವಾಗಲೂ ಮಕ್ಕಳಿಗೆ ಸ್ಫೂರ್ತಿದಾಯಕವಾಗಿದ್ದರು. ಅವಿವಾಹಿತರಾಗಿದ್ದ ಅವರಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ ಇತ್ತು. ಆಧ್ದರಿಂದ ಅವರಿಗೆ ಇಡೀ ದೇಶದ ಜನತೆ ಅವರ ಕುಟುಂಬಸ್ಥರಾಗಿದ್ದರು. ಸಾಯುವ ಕೊನೆಗಳಿಗೆಯಲ್ಲೂ ದೇಶದ ಮಕ್ಕಳು ಅವರ ಮಕ್ಕಳಾಗಿದ್ದರು. ಅವಧಿ ಮುಗಿದರೂ ಕೂಡ ಅವರ ದೇಶದ ಅಭಿವೃದ್ಧಿ ಕಾರ್ಯದಲ್ಲಿ ನಿಷ್ಕ್ರಿಯರಾಗಿರಲಿಲ್ಲ. ಸದಾ ಕ್ರಿಯಾಶೀಲರಾಗಿದ್ದರು ಎಂದರು.  
 
''ಕನಸೆಂಬುದು ರಾತ್ರಿ ಕಾಣುವುದಲ್ಲ, ಕನಸೆಂಬುದು ನಿಮ್ಮ ನಿದ್ರೆಗೆ ಭಂಗ ತರುವಂತಿರಬೇಕು'' ಎನ್ನುತ್ತಿದ್ದ ಅವರ ಅವರ ಮಾತು ನನ್ನನ್ನು ಯಾವಾಗಲೂ ಕಾಡುತ್ತದೆ ಎಂದ ಅವರು, ದೇಶಕ್ಕೆ ಅವರ ಕೊಡುಗೆ ಅಪಾರವಾದುದು. ಶ್ರೇಷ್ಠ ಮಾರ್ಗದರ್ಶಕ, ಸ್ಫೂರ್ತಿದಾಯಕ ನಾಯಕರನ್ನು ಕಳೆದುಕೊಂಡಿದ್ದೇವೆ ಎಂದು ಸಂತಾಪ ಸೂಚಿಸಿದರು. 

ವೆಬ್ದುನಿಯಾವನ್ನು ಓದಿ