ನಾನು ವೈಯಕ್ತಿಕ ಟೀಕೆ ಮಾಡಲಿಲ್ಲ, ಕರ್ನಾಟಕದಲ್ಲಿ ಮೋದಿ ಅಲೆ ವರ್ಕೌಟ್ ಅಗಲ್ಲ: ಸಿಎಂ ಸಿದ್ದರಾಮಯ್ಯ

ಗುರುವಾರ, 13 ಏಪ್ರಿಲ್ 2017 (15:25 IST)
ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಮತದಾರರಿಗೆ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆ. ಉಪಚುನಾವಣೆಗಳು ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ ಎಂದು ಹೇಳಿದ್ದೆ. ಈಗಲೂ ಇದನ್ನೇ ಹೇಳುತ್ತಿದ್ದೇನೆ. ಆದರೆ, ಬಿಜೆಪಿಯವರು ಇದು ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದು ಹೇಳಿದ್ದರು. ಬಿಜೆಪಿಯವರು ವೈಯಕ್ತಿಕ ಟೀಕೆಗಳಲ್ಲೇ ಕಾಲ ಕಳೆದರು. ಒಣ ಣಜಂಭದ ಮಾತುಗಳನ್ನಾಡಿದರು ಎಂದು ಸಿಎಂ ಆರೋಪಿಸಿದ್ದಾರೆ.
 

ಆದರೆ, ನಾವು ಜನರ ಮುಂದೆ ನಮ್ಮ ಪಕ್ಷದ ಸಿದ್ಧಾಂತ ಮತ್ತು ಅಭಿವೃದ್ಧಿ ಕಾರ್ಯಗಳನ್ನ ಜನರ ಮುಂದಿಟ್ಟಿದ್ದೆವು. ಕಳೆದ ಎಲ್ಲ ಬಜೆಟ್`ಗಳಲ್ಲಿ ಜನರಿಗೆ ನೀಡಿದ್ದ ಭರವಸೆ ಈಡೇರಿಸಿದ್ದೇವೆ. ಜನರ ಮನಸ್ಸು ತಿಳಿದುಕೊಳ್ಳಲು ಇದೊಂದು ಅವಕಾಶವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಾವು ಮಾಡಿದ ಕೆಲಸಕ್ಕೆ ಮತ ಹಾಕುವ ಮೂಲಕ ಕೂಲಿ ಕೊಡಿ ಎಂದು ಕೇಳಿದ್ದೆವು. ನನ್ನ ವಿರುದ್ಧ ಯಡಿಯೂರಪ್ಪ ಻ಯೋಗ್ಯ ಮುಖ್ಯಮಂತ್ರಿ ಎಂಬ ಪದ ಬಳಸಿದ್ದಾರೆ. ನಾನು ಅವರ ವಿರುದ್ಧ ಕೆಟ್ಟ ಪದ ಬಳಸಿಲ್ಲ. ಶ್ರೀನಿವಾಸ ಪ್ರಸಾದ್ ಸಹ ನನ್ನ ವಿರುದ್ಧ ಕೀಳುಮಟ್ಟದ ಪದ ಬಳಸಿದ್ದರು. ನಾನು ಮತ್ತು ಸಿದ್ದರಾಮಯ್ಯ ನಡುವಿನ ಚುನಾವಣೆ ಎಂದು ಹೇಳಿದ್ದರು. ಇದು ಜಾತ್ಯಾತೀತ ಪಕ್ಷ ಕಾಂಗ್ರೆಸ್ ಮತ್ತು ಕೋಮುವಾದಿ ಬಿಜೆಪಿ ವಿರುದ್ಧದ ಚುನಾವಣೆ ಎಂದು ಹೇಳಿದ್ದೆವು. ಆದರೆ, ನಾನು ಎಲ್ಲಿಯೂ ಶ್ರೀನಿವಾಸಪ್ರಸಾದ್ ಹೆಸರೇ ಎತ್ತಿಲ್ಲ.

ಜಾತಿ ಧರ್ಮದ ಹೆಸರಲ್ಲಿ ಯಡಿಯೂರಪ್ಪ ಮತ ಕೇಳಲು ಪ್ರಯತ್ನಿಸಿದರು. ನಮಗೆ ಎಲ್ಲ ಜಾತಿಯವರು. ಎಲ್ಲ ಧರ್ಮದವರು ಮತ ಹಾಕಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ ಇದೆ ಎನ್ನುತ್ತಿದ್ದರು. ಆದರೆ, ನಮ್ಮಲ್ಲಿ ಆಡಳಿತ ಪರ ಅಲೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 2018ರ ಚುನಾವಣೆಯಲ್ಲೂ ನಾವು ಗೆಲ್ಲುತ್ತೇವೆ.

ಉತ್ತರಪ್ರದೇಶ ಚುನಾವಣೆ ಬಳಿಕ ಕರ್ನಾಟಕದಲ್ಲಿ ಮೋದಿ ಅಲೆ ಬೀಸುತ್ತದೆ ಎಂದು ಬಿಜೆಪಿಯವರು ಹೇಳಿದ್ದರು. ಇದು ಬಸವಣ್ಣ ಶರಣರು, ಚಿಂತಕರಿದ್ದ ನಾಡು ಇಲ್ಲಿ ಮೋದಿ ಅಲೆ ವರ್ಕೌಟ್ ಆಗಲ್ಲ. ಯಡಿಯೂರಪ್ಪ ನಾನು ನಿಂತಿದ್ದೀನಿ ಎಂದು ತಿಳಿದುಕೊಳ್ಳಿ, ಮತ ಹಾಕಿ. ನಾನು ಮುಖ್ಯಮಂತ್ರಿಯಾಗಬೇಕೆಂದರೆ ಮತ ಹಾಕಿ ಎಂದು ಭಾಷಣ ಮಾಡುತ್ತಿದ್ದರು ಎಂದು ಸಿಎಂ ಲೇವಡಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ