ಸಿಎಂ ಹೇಳಿಕೆಯಿಂದ ತುಂಬಾ ನೋವಾಗಿದೆ ಎಂದ ಶಾಸಕ ಮೊಹಿನುದ್ದಿನ್ ಬಾವಾ

ಮಂಗಳವಾರ, 31 ಮೇ 2016 (16:20 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ತರಾಟೆಗೆ ತೆಗೆದುಕೊಂಡಿದ್ದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಕಾಂಗ್ರೆಸ್ ಶಾಸಕ ಮೊಹಿನುದ್ದಿನ್ ಬಾವಾ ಹೇಳಿದ್ದಾರೆ. 
 
ಮೊಹಿನುದ್ದಿನ್ ಬಾವಾ ಅವರ ಸಹೋದರ ಬಿ.ಎ.ಫಾರೂಖ್ ಜೆಡಿಎಸ್ ಪಕ್ಷದಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದರಿಂದ ಕೋಪಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಕ್ಷದ ಶಾಸಕಾಂಗ ಸಭೆಯಲ್ಲಿ ಮೊಹಿನುದ್ದಿನ್ ಬಾವಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
 
ಮುಖ್ಯಮಂತ್ರಿಯವರ ವರ್ತನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಇದರಿಂದ ನನ್ನ ಕ್ಷೇತ್ರದ ಜನರಲ್ಲಿ ನಾವು ಮುಖ್ಯಮಂತ್ರಿ ಅವರ ಬಳಿ ಹೋಗಿ ನಮ್ಮ ವೈಯಕ್ತಿಕ ಕೆಲಸಗಳನ್ನು ಮಾತ್ರ ಮಾಡಿಸಿಕೊಳ್ಳುತ್ತೇವೆ ಎನ್ನುವ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಮೊಹಿನುದ್ದಿನ್ ಬಾವಾ ಬೇಸರ ವ್ಯಕ್ತಪಡಿಸಿದರು.
 
ವೈಯಕ್ತಿಕ ಕೆಲಸಕ್ಕಾಗಿ ನಾನು ಅಥವಾ ನನ್ನ ಕುಟುಂಬ ಸದಸ್ಯರು ಎಂದೂ ಮುಖ್ಯಮಂತ್ರಿ ಅವರ ಬಳಿ ತೆರಳಿಲ್ಲ. ಪಕ್ಷದ ಕುರಿತು ಚರ್ಚೆ ನಡೆಸಲು ಮಾತ್ರ ಅವರ ಬಳಿ ಹೋಗುತ್ತಿದ್ದೇವು. ಆದರೆ, ಮುಖ್ಯಮಂತ್ರಿಯವರು ವೈಯಕ್ತಿಕ ಕೆಲಸಕ್ಕಾಗಿ ನಿನ್ನ ಸಹೋದರನನ್ನು ನನ್ನ ಬಳಿ ಕರೆತಂದಿರಲಿಲ್ಲವೇ ಎಂದು ಪ್ರಶ್ನಿಸಿದ್ದರು.
 
ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನೇ ಬೆಂಬಲಿಸುತ್ತೇನೆ. ನನ್ನ ರಾಜಕೀಯ ಜೀವನ ಮತ್ತು ನನ್ನ ತಮ್ಮನ ರಾಜಕೀಯ ಜೀವನಕ್ಕೆ ಸಂಬಂಧವಿಲ್ಲ ಎಂದು ಮೊಹಿನುದ್ದಿನ್ ಬಾವಾ ಸ್ಪಷ್ಟಪಡಿಸಿದ್ದಾರೆ.


ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ