ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರವಧಿ ಪೂರ್ಣಗೊಳಿಸಲಿ: ಈಶ್ವರಪ್ಪ

ಬುಧವಾರ, 27 ಆಗಸ್ಟ್ 2014 (12:27 IST)
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಾಂಗ್ರೆಸ್ ಸ್ವತಂತ್ರವಾಗಿ ಆಡಳಿತ ನಡೆಸಲು ಬಿಡಬೇಕೆಂದು ಹೇಳುವ ಮೂಲಕ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯ ಪರ ಬ್ಯಾಟಿಂಗ್ ನಡೆಸಿದ್ದಾರೆ.
 
ಇಲ್ಲಿನ ಡಾ.ಗುಬ್ಬಿ ವೀರಣ್ಣ ಕ್ಷೇತ್ರದಲ್ಲಿ ನಡೆದ ಜಿಲ್ಲಾ ಕುರುಬರ ಸಂಘಧ ಸರ್ವ ಸದಸ್ಯರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೈ ಕಟ್ಟಿ ಕೂರಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
 
ಸಂಪುಟ ಪುನಾರಚನೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಆದರೆ ಈ ವಿಷಯದಲ್ಲಿ ಸಿಎಂ ಮೇಲೆ ದೆಹಲಿ ಮತ್ತು ರಾಜ್ಯ ಮುಖಂಡರಿಂದ ಒತ್ತಡ ತರಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಐದು ವರ್ಷಗಳ ಕಾಲ ಆಡಳಿತ ನಡೆಸಲು ಬಿಡಬೇಕು ಎಂದರು.
 
ಸಿದ್ದರಾಮಯ್ಯ ಮತ್ತು ಎಚ್.ಎಂ ರೇವಣ್ಣ ಅವರಿಗೆ ಕಾಂಗ್ರೆಸ್‌ನಲ್ಲಿ ಉತ್ತಮ ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಬಳಸಿಕೊಂಡು ಅವರು ಸಮಾಜಕ್ಕೆ ಒಳಿತಾಗುವು ಕೆಲಸ ಮಾಡಲಿ ಎಂದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕನಕ ಜಯಂತಿಗೆ ಸಾರ್ವತ್ರಿಕ ರಜೆ ಘೋಷಿಸುವಂತೆ ಮಾಡಿದೆ. ಹಿಂದುಳಿದ ವರ್ಗದ ಮಠಗಳಿಗೆ ಅವಶ್ಯಕ ಅನುದಾನ ಬಿಡುಗಡೆಗೂ ಶ್ರಮಿಸಿದೆ. ನಮಗೆ ಕುಟಂಬ, ಜಾತಿ, ಸಮಾಜ, ಧರ್ಮ, ರಾಷ್ಟ್ರ ಎಲ್ಲವೂ ಮುಖ್ಯ. ಕುಟುಂಬದಿಂದ ರಾಷ್ಟ್ರದವರೆಗೆ ಎಲ್ಲರ ಹಿತ ಕಾಯುವುದ ನಮ್ಮ ಕರ್ತವ್ಯವಾಗಬೇಕು ಎಂದರು.

ವೆಬ್ದುನಿಯಾವನ್ನು ಓದಿ