ಕೋಮುವಾದಿಗಳಿಗೆ ಯಾವಾಗಲೂ ಕಾಮಲೆ ಕಣ್ಣು ಇರುತ್ತದೆ: ಸಿಎಂ

ಶುಕ್ರವಾರ, 19 ಮೇ 2017 (17:38 IST)
ಸರಕಾರ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದರೂ ವಿಪಕ್ಷಗಳು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿವೆ. ಕೋಮುವಾದಿಗಳಿಗೆ ಯಾವಾಗಲೂ ಕಾಮಲೆ ಕಣ್ಣು ಇರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
 
ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆಯುತ್ತಿರುವ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದಾಗ ಬಿಜೆಪಿಯವರು ಬರಅಧ್ಯಯನಕ್ಕಾಗಿ ಹೋಗಲೇ ಇಲ್ಲ. ಇದೀಗ ಮಳೆ ಬರುತ್ತಿರುವಾಗ ಬರ ಅಧ್ಯಯನಕ್ಕೆ ಹೊರಟಿದ್ದಾರೆ. ಕೊಡೆ ಹಿಡಿದುಕೊಂಡು ಬರ ಅಧ್ಯಯನ ಮಾಡುತ್ತಾರೆ ಎಂದು ಲೇವಡಿ ಮಾಡಿದರು.
 
ಬಿಜೆಪಿಯವರಿಗೆ ರೈತರ ಪರ ಕಾಳಜಿಯಿಲ್ಲ. ಬಿಜೆಪಿ ನಾಯಕರಲ್ಲಿ ವಿಶ್ವಾಸದ ಕೊರತೆಯಿದೆ. ಪಕ್ಷದಲ್ಲಿ ಅಂತರಿಕ ಕಚ್ಚಾಟವಿದೆ. ಕಚ್ಚಾಟವನ್ನು ದೂರವಿಡಲು ಬರ ಅಧ್ಯಯನ ಪ್ರವಾಸಕ್ಕೆ ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಬಿಜೆಪಿಯವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಆದರೆ, ಮುಸ್ಲಿಂ, ಕ್ರಿಶ್ಚಿಯನ್‌ರನ್ನು ಹೊರಗೆ ಬರಲು ಬಿಡುವುದಿಲ್ಲ. ನಾನು ಜಿಲೆಬಿ(ಗೌಡ, ಬ್ರಾಹ್ಮಣ, ಲಿಂಗಾಯುತ) ಪರ ಅಲ್ಲ. ಕೇವಲ ಅಹಿಂದ್ ಪರ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ ಎಂದರು.

165 ಭರವಸೆಗಳ ಪೈಕಿ 155 ಭರವಸೆಗಳನ್ನು ಈಡೇರಿಸಿದ್ದೇವೆ. ಉಳಿದ ಭರವಸೆಗಳನ್ನು ಪ್ರಸಕ್ತ ವರ್ಷದಲ್ಲಿ ಈಡೇರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ