ಜಗ್ಗೇಶ್ ವಿರುದ್ದ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಶನಿವಾರ, 5 ಸೆಪ್ಟಂಬರ್ 2015 (16:58 IST)
ವಿಧಾನ ಪರಿಷತ್‌ನ ಇಬ್ಬರು ಬಿಜೆಪಿ ಸದಸ್ಯರುಗಳು ಎರಡು ವಿಳಾಸಗಳಲ್ಲಿ ಚುನಾವಣಾ ಗುರುತಿನ ಚೀಟಿಗಳನ್ನು ಹೊಂದಿದ್ದು, ಅವರಿಗೆ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಅವಕಾಶ ನೀಡಬಾರದು ಎಂದು ಆರೋಪಿಸಿ ಜಗ್ಗೇಶ್ ಮತ್ತು ಡಿ.ಎಸ್.ವೀರಯ್ಯ ಅವರ ವಿರುದ್ಧ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮನೋಹರ್ ಅವರು ಬಿಬಿಎಂಪಿ ಮುಖ್ಯ ಚುನಾವಣಾಧಿಕಾರಿಗಳಿಗೆ ಇಂದು ದೂರು ಸಲ್ಲಿಸಿದ್ದಾರೆ.  
 
ನಗರದ ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿದ ಮನೋಹರ್, ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರಿಗೆ ದೂರು ಸಲ್ಲಿಸಿದರು. 
 
ಮನೋಹರ್ ತಮ್ಮ ದೂರಿನಲ್ಲಿ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯರುಗಳಾದ ಜಗ್ಗೇಶ್ ಮತ್ತು ವೀರಯ್ಯ ಅವರು ಎರಡು ಕಡೆಗಳ ವಿಳಾಸಗಳಲ್ಲಿ ಚುನಾವಣಾ ಗುರುತಿನ ಚೀಟಿ ಹೊಂದಿದ್ದು, ಜಗ್ಗೇಶ್ ಅವರು ತುರುವೇಕೆರೆ ಮತ್ತು ಮಲ್ಲೇಶ್ವರಂ ವಿಳಾಸಗಳ ಗುರುತಿನ ಚೀಟಿಗಳನ್ನು ಹೊಂದಿದ್ದರೆ, ವೀರಯ್ಯ ಅವರು ಬೆಂಗಳೂರಿನ ವಿಜಯನಗರ ಮತ್ತು ಕೋಲಾರ ವಿಳಾಸಗಳಲ್ಲಿ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ