ನ್ಯಾಯಾಂಗ ನಿಂದನೆ ನಡೆದಿದೆ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಮಂತ್ರಿ ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಸುಶೀಲ್ ಮಂತ್ರಿ ಅವರಿಗೆ ನ್ಯಾಯಾಧೀಕಱಣವು ನೋಟಿಸ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಸುಶೀಲ್ ಮಂತ್ರಿ, ಸಮಿತಿಗೆ ಅಡ್ಡಿಪಡಿಸಬೇಕೆಂಬ ಯಾವುದೇ ಉದ್ದೇಶ ಇರಲಿಲ್ಲ. ಅಲ್ಲದೆ ಸಮಿತಿಯ ಯಾವ ಸದಸ್ಯರಿಗೂ ಕೂಡ ಅಪಮಾನ ಮಾಡಿಲ್ಲ ಎಂದು ಬೆಷರತ್ ಕ್ಷಮೆ ಯಾಚಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಕರಣವು ಮನ್ನಿಸಿ ಕಂಪನಿಯ ವಿರುದ್ಧ ಇದ್ದ ದೂರನ್ನು ಇತ್ಯರ್ಥಗೊಳಿಸಿದೆ.
ಇನ್ನು ಕೆರೆ ಒತ್ತುವರಿಯಾಗಿದೆ ಎಂಬ ಕಾರಣದಿಂದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ಮಂತ್ರಿ ಡೆವಲಪರ್ಸ್ ಕಂಪನಿಯ ಜಾಗ ಹಾಗೂ ಕೆರೆಯನ್ನು ಸಮೀಕ್ಷೆ ನಡೆಸಲು ರಾಮಚಂದ್ರನ್ ನೇತೃತ್ವದಲ್ಲಿ ಸಮಿತಿ ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಸೆ.11 ರಂದು ಬೆಂಗಳೂರಿಗೆ ಆಗಮಿಸಿದ್ದ ಎನ್ಜಿಟಿ ಸಮಿತಿ ಸಮೀಕ್ಷೆ ಮಾಡಲು ಮುಂದಾಗಿತ್ತು. ಆದರೆ ಈ ವೇಳೆ ಡೆವಲಪರ್ಸ್ ಸಿಬ್ಬಂದಿಗಳು ಸದಸ್ಯರಿಗೆ ಸಮೀಕ್ಷೆ ನಡೆಸದಂತೆ ಅಡ್ಡಿ ಪಡಿಸಿದ್ದರು. ನ್ಯಾಯಾಂಗ ನಿಂದನೆಯಾಗಿದೆ ಎಂದು ಆರೋಪಿಸಿ ಮಂತ್ರಿ ಡೆವಲಪರ್ಸ್ ವಿರುದ್ಧ ನವಬೆಂಗಳೂರು ಫೌಂಡೇಶನ್ ಎಂಬ ಸರ್ಕಾರೇತರ ಸಂಘ ಸಂಸ್ಥೆಯೊಂದು ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಕರಣವು ನೋಟಿಸ್ ನೀಡಲಾಗಿತ್ತು. ವಿಚಾರಣೆ ವೇಳೆ, ಎನ್ಜಿಒ ಪರ ವಕೀಲರು ವಾದ ಮಂಡಿಸಿ ಕಟ್ಟಡ ಕಾಮಗಾರಿಗಾಗಿ ತೆಗೆದುಕೊಂಡಿದ್ದ ಪ್ಲ್ಯಾನ್ ಅವಧಿ ಮುಗಿದಿದೆ. ಹೊಸ ಪ್ಲ್ಯಾನ್ಗೆ ಅನುಮೋದನೆ ಪಡೆದಿಲ್ಲ. ಹಾಗಾಗಿ ಕಟ್ಟಡ ನಿರ್ಮಾಣ ಕಾಮಗಾರಿಗೆ ತಡೆ ನೀಡಬೇಕೆಂದು ವಾದಿಸಿದರು.