ತಮ್ಮ ಚಿತೆ ತಾವೇ ನಿರ್ಮಿಸಿ ದಂಪತಿ ಆತ್ಮಹತ್ಯೆ

ಶನಿವಾರ, 24 ಡಿಸೆಂಬರ್ 2016 (14:54 IST)
ತಮ್ಮ ಚಿತೆಯನ್ನು ತಾವೇ ನಿರ್ಮಿಸಿಕೊಂಡು ದಂಪತಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆಯೊಂದು ಕಾರ್ಕಳದ ಹಿರ್ಗಾನ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೃತರ ಮನೆ ಸುತ್ತಮುತ್ತ ಮನೆಗಳಲ್ಲದಿರುವುದರಿಂದ ಘಟನೆ ನಡೆದು ಎರಡು ದಿನಗಳಾದರೂ ಅದು ಯಾರ ಗಮನಕ್ಕೂ ಬಂದಿಲ್ಲ.

ಸೀತಾರಾಮ ಆಚಾರ್ಯ ( 55) ಮತ್ತು ಸುನಂದಾ (45) ಸಾವಿಗೆ ಶರಣಾದ ಪತಿ-ಪತ್ನಿಯರಾಗಿದ್ದಾರೆ. ಇವರ ಮನೆಯಿಂದ ಸ್ವಲ್ಪ ದೂರದಲ್ಲಿ ವಾಸವಾಗಿದ್ದ ಕುಟುಂಬವೊಂದು ಕಳೆದ ನಾಲ್ಕು ದಿನಗಳಿಂದ ಮನೆಯಲ್ಲಿರಲಿಲ್ಲ. ಇಂದು ಮನೆಗೆ ಹಿಂತಿರುಗಿದಾಗ ಆಚಾರ್ಯ ದಂಪತಿ ನಿವಾಸದ ಹಂಚು ಬೆಂಕಿಯಿಂದ ಹಾನಿಯಾಗಿರುವುದು ಕಂಡಿದೆ. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. 
 
ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ದಂಪತಿ ಸಾವಿಗೆ ಮಕ್ಕಳಿಲ್ಲದಿರುವ ಕೊರಗೆ ಕಾರಣ ಎಂದು ಹೇಳಲಾಗುತ್ತಿದೆ.
 
ಮನೆಯ ದೇವರ ಕೊಣೆಯಲ್ಲಿ ಸೌದೆಗಳಿಂದ ಚಿತೆ ನಿರ್ಮಿಸಿರುವ ದಂಪತಿ ಮನೆಯ ಎಲ್ಲ ಬಾಗಿಲುಗಳನ್ನು ಮುಚ್ಚಿ, ಒಳಗಿನಿಂದ ಚಿಲಕ ಹಾಕಿದ್ದಾರೆ. ಬಳಿಕ ಚಿತೆಯ ಮೇಲೆ ಮಲಗಿ ಬೆಂಕಿ ಹಚ್ಚಿಕೊಂಡಿದ್ದಾರೆ. ಇಬ್ಬರ ದೇಹ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಮೂಳೆಗಳು ಮಾತ್ರ ಉಳಿದುಕೊಂಡಿದೆ ಎಂದು ತಿಳಿದು ಬಂದಿದೆ. 
 

ವೆಬ್ದುನಿಯಾವನ್ನು ಓದಿ