ಪತ್ನಿ ಜತೆ ಸೇರಿ ಅತ್ತಿಗೆಯನ್ನು ಕೊಂದ!

ಮಂಗಳವಾರ, 1 ಮಾರ್ಚ್ 2016 (08:50 IST)
ಮೈದುನನೋರ್ವ ತನ್ನ ಹೆಂಡತಿಯ ಜತೆ ಸೇರಿ ಅತ್ತಿಗೆಯನ್ನೇ ಕೊಂದ ದಾರುಣ ಘಟನೆ ಉಡುಪಿಯಲ್ಲಿ ನಡೆದಿದೆ. 
 
ಕುಂದಾಪುರ ತಾಲ್ಲೂಕಿನ ಗಂಗೊಳ್ಳಿಯ ಉಪ್ಪಿನಕುದ್ರು ಕಳಿವಿನಬಾಗಿಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಕ್ಷುಲ್ಲಕ ಕಾರಣಕ್ಕೆ ಜ್ಯೋತಿ ಖಾರ್ವಿ (26) ಜತೆ ಜಗಳಕ್ಕಿಳಿದ ಗುರುರಾಘವೇಂದ್ರ (26), ಪತ್ನಿ ದಿವ್ಯಾ (19) ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. 
 
ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ಮೃತ ಜ್ಯೋತಿ ಪತಿಯ ಮನೆಯ ಸಮೀಪವೇ ಇದ್ದ ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಗುರುರಾಘವೇಂದ್ರ ಕ್ಷುಲ್ಲಕ ಕಾರಣಕ್ಕೆ ಏಕಾಏಕಿ ಜಗಳಕ್ಕೆ ಇಳಿದಿದ್ದಾನೆ. 
 
ಮಾತಿಗೆ ಮಾತು ಬೆಳೆದು ಕೊನೆಗೆ ಗುರು ಪತ್ನಿ ದಿವ್ಯಾ ಅತ್ತಿಗೆಯನ್ನು ಹಿಗ್ಗಾಮುಗ್ಗಾ ಥಳಿಸಲು ಆರಂಭಿಸಿದ್ದಾಳೆ. ಪತಿ ಗುರು ಸಹ ಅತ್ತಿಗೆಯ ಕುತ್ತಿಗೆಯನ್ನು ಅದುಮಿದ್ದಾನೆ. ಜ್ಯೋತಿಯ ಸಹೋದರರು ಮತ್ತು ಸ್ಥಳೀಯರು ಅವರನ್ನು ತಡೆದು ಗಾಯಗೊಂಡ ಜ್ಯೋತಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
 
ಸಂಪೂರ್ಣ ಅಸ್ವಸ್ಥರಾದ ಜ್ಯೋತಿಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ.ಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ ಸಾವನ್ನಪ್ಪಿದ್ದಾಳೆ. ಕಳೆದ ವರ್ಷ ಹೊಟ್ಟೆಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಜ್ಯೋತಿಯ ಹೊಟ್ಟೆ ಭಾಗಕ್ಕೆ ಬಲವಾದ ಹೊಡೆತ ಬಿದ್ದ ಕಾರಣ ಆಕೆ ಸಾವನ್ನಪ್ಪಿದ್ದಾಳೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
 
ಕಳೆದ ಮೂರು ವರ್ಷಗಳ ಹಿಂದಷ್ಟೇ ಗುರು ಸಹೋದರ ವಿಜಯ್ ಜತೆ ಪ್ರೇಮ ವಿವಾಹವಾಗಿದ್ದ ಜ್ಯೋತಿ ತನ್ನ ಮೂರು ತಿಂಗಳ ಮಗು ಸತ್ತ ನೋವಿನಲ್ಲಿದ್ದರು. ಮಗಳನ್ನು ಕಳೆದುಕೊಂಡು ದುಃಖದಲ್ಲಿದ್ದ ವಿಜಯ್ ಈಗ ಪ್ರೀತಿಸಿ ಮದುವೆಯಾಗಿದ್ದವಳನ್ನು ಸಹ ಕಳೆದುಕೊಳ್ಳುವಂತಾಗಿದೆ. 

ವೆಬ್ದುನಿಯಾವನ್ನು ಓದಿ