ಘಟನೆಯಿಂದ ಕಂಗಾಲಾಗಿರುವ ಬಾಲಕಿಯ ಕುಟುಂಬದವರು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಘಟನೆ ಕುರಿತು ಬಾಲಕಿ ಪೋಷಕರು ಜು. 14ರಂದು ಮೇಟಗಳ್ಳಿ ಠಾಣೆ ಪೊಲೀಸ್ ಠಾಣೆಯಲ್ಲಿ ಆರೋಪಿ ಲೋಕೇಶ್ ಹಾಗೂ ಆತನ ಸ್ನೇಹಿತರಾದ ಲಕ್ಷಣ, ಭರತ, ಅನ್ನಪೂರ್ಣ ಮತ್ತು ಮೋಹನ ಎಂಬವರ ವಿರುದ್ಧ ದೂರು ನೀಡಿರುವ ಹಿನ್ನೆಲೆಯಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಏನಿದು ಪ್ರಕರಣ?: ಆರೋಪಿ ಲೋಕೇಶ್ ಏಕಲವ್ಯನಗರದ ನಿವಾಸಿಯೊಬ್ಬರ 16 ವರ್ಷದ ಬಾಲಕಿಯನ್ನು ಅಪಹರಿಸಿ ಮದುವೆಯಾಗಿ ಅತ್ಯಾಚಾರ ಎಸಗಿದ್ದ. ಈ ಕುರಿತು ಪಂಚಾಯಿತಿ ನಡೆಸಿದ ಏಕಲವ್ಯನಗರದ ಅಲೆಮಾರಿ ಜನಾಂಗದ ಮುಖಂಡರು ಬಾಲಕಿಗೆ 18 ವರ್ಷ ತುಂಬಿದ ಬಳಿಕ ಮರು ಮದುವೆ ಮಾಡಿಸಲು ತೀರ್ಮಾನಿಸಿ, ಬಾಲಕಿ ಮತ್ತು ಲೋಕೇಶನನ್ನು ದೂರ ಮಾಡಿದ್ದರು.
ಪಂಚಾಯಿತಿ ತೀರ್ಮಾನದಂತೆ ಬಾಲಕಿ ತನ್ನ ಪೋಷಕರ ಮನೆಯಲ್ಲಿ ಉಳಿದಿಕೊಂಡಿದ್ದಳು. ಆದರೆ, ಜು. 12ರಂದು ರಾತ್ರಿ 8.30ರಲ್ಲಿ ಇಲ್ಲದ ನೆಪ ಮಾಡಿಕೊಂಡು ತನ್ನ ಬೆಂಬಲಿಗರ ಜೊತೆಗೆ ಬಾಲಕಿ ಮನೆಗೆ ತೆರಳಿದ ಆರೋಪಿ ಲೋಕೇಶ್, ಬಾಲಕಿಯನ್ನು ತನ್ನೊಂದಿಗೆ ಕಳುಹಿಸುವಂತೆ ಕೇಳಿದ್ದಾನೆ. ಆದರೆ, ಆಕೆಯ ತಾಯಿ ಲೋಕೇಶ್ ಮಾತನ್ನು ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಲೋಕೇಶ್ ಬಾಲಕಿಯ ತಾಯಿ ಮತ್ತು ಸಹೋದರಿ (14 ವರ್ಷ)ಯ ಮೇಲೆ ಬಲತ್ಕಾರಕ್ಕೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಬಾಲಕಿ ಪೋಷಕರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.