ಡಿ.ಕೆ.ರವಿ ನಿಗೂಢ ಸಾವು ಪ್ರಕರಣ: ತಾಯಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಶುಕ್ರವಾರ, 20 ಮಾರ್ಚ್ 2015 (10:55 IST)
ದಕ್ಷ ಅಧಿಕಾರಿ ಡಿ.ಕೆ.ರವಿ ಅವರ ಸಾವನ್ನು ಅರಗಿಸಿಕೊಳ್ಳಲಾಗದೆ ಅವರ ತಾಯಿ ತೀವ್ರವಾಗಿ ಅಸ್ವಸ್ಥರಾಗಿದ್ದು, ಅವರನ್ನು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ಮಗನನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ಮನನೊಂದಿದ್ದ ಡಿ.ಕೆ.ರವಿ ಅವರ ತಾಯಿ ಗೌರಮ್ಮ ನನ್ನ ಮಗನ ನಿಗೂಢ ಸಾವು ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲವಾದಲ್ಲಿ ನಾನು ಆಹಾರ ಸೇವಿಸುವುದಿಲ್ಲ ಎಂದು ಕಳೆದ ನಾಲ್ಕು ದಿನಗಳಿಂದ ಪಟ್ಟು ಹಿಡಿದು ದೃಢ ನಿರ್ಧಾರ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಗೌರಮ್ಮ ಅಸ್ವಸ್ಥರಾಗಿದ್ದಾರೆ.  
 
ಪ್ರಸ್ತುತ ಅಸ್ವಸ್ಥಗೊಂಡಿರುವ ರವಿ ತಾಯಿ ಅವರನ್ನು ಅಣ್ಣ ಡಿ.ಕೆ.ರಮೇಶ್ ಅವರು ಇಲ್ಲಿನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 
 
2009ನೇ ಸಾಲಿನ ಐಎಎಸ್ ಅಧಿಕಾರಿಗಳ ಬ್ಯಾಚ್‌ನಲ್ಲಿ 36ನೇ ರ್ಯಾಂಕ್ ಪಡೆದಿದ್ದ ಹಿರಿಯ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರು ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ, ಕೊಪ್ಪಳ ತಾಲೂಕು ಪಂಚಾಯತ್ ನಲ್ಲಿ ಸಿಇಓ ಹಾಗೂ ಗುಲ್ಬರ್ಗಾದಲ್ಲಿ ಎಸಿಯಾಗಿ ಸೇವೆ ಸಲ್ಲಿಸಿ ತಮ್ಮ ದಕ್ಷ ಆಡಳಿತದ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು. 
 
ಇತ್ತೀಚೆಗೆ ಸರ್ಕಾರ ಅವರನ್ನು ರಾಜ್ಯದ ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರನ್ನಾಗಿ ನೇಮಿಸಿತ್ತು. ಅಲ್ಲಿಯೂ ಕೂಡ ಉತ್ತಮ, ದಕ್ಷ ಆಡಳಿತವನ್ನು ತೋರಿದ್ದ ಅಧಿಕಾರಿ ರವಿ, ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕಳೆದ ಸೋಮವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
 

ವೆಬ್ದುನಿಯಾವನ್ನು ಓದಿ