ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಸಮನ್ವಯ ಸಭೆ

ಶನಿವಾರ, 31 ಜನವರಿ 2015 (12:23 IST)
ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ನಡೆಯುತ್ತಿದ್ದು, ಶಾಸಕರಿಂದ ಅಭಿಪ್ರಾಯ ಕಲೆ ಹಾಕುವಲ್ಲಿ ಸಿಂಗ್ ನಿರತರಾಗಿದ್ದಾರೆ.

ಈ ಸಭೆಯು ದಿಗ್ವಿಜಯ್ ಸಿಂಗ್ ಅವರು ನಡೆಸುತ್ತಿರುವ ಎರಡನೇ ದಿನದ ಸಭೆಯಾಗಿದ್ದು, ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಹಲವು ಟೀಕೆಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಪರಾಮರ್ಶನ ಸಭೆಯನ್ನು ಸಿಂಗ್ ಹಮ್ಮಿಕೊಂಡಿದ್ದು, ಸರ್ಕಾರದ ಸಚಿವರ ಕಾರ್ಯ ವೈಖರಿ ಬಗ್ಗೆ ಪಕ್ಷದ ಶಾಸಕರಿಂದಲೇ ಅಭಿಪ್ರಾಯ ಪಡೆಯಲು ಮುಂದಾಗಿದ್ದಾರೆ.

ಇನ್ನು ಹಲವು ಶಾಸಕರು ತಮ್ಮ ಅಭಿಪ್ರಾಯಗಳನ್ನು ಈಗಾಗಲೇ ವ್ಯಕ್ತಪಡಿಸಿದ್ದು, ಸಚಿವರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಲ್ಲದೆ ಅನುಭವಿ ಹಾಗೂ ಹಿರಿಯ ಶಾಸಕರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸುಗಮವಾಗಿಲ್ಲ. ಹಾಗಾಗಿ ಕೆಲ ಸಚಿವರನ್ನು ಕೈಬಿಟ್ಟು ಅನುಭವಿ ಶಾಸಕರಿಗೆ ಸಚಿವ ಸಂಪುಟದಲ್ಲಿ ಆದ್ಯತೆ ನೀಡಬೇಕು ಎಂದು ಸಚಿವರ ವಿರುದ್ಧ ಹಲವು ದೂರುಗಳನ್ನು ನೀಡುವ ಮೂಲಕ ತಮ್ಮ ಅಸಮಧಾನ ಹೊರ ಹಾಕಿದ್ದಾರೆ.

ಅಷ್ಟೇಅಲ್ಲದೆ, ಸಂಪುಟದ ಪುನರ್ ರಚನೆಗೆ ಒತ್ತಾಯಿಸಿರುವ ಶಾಸಕರು, ಸಚಿವರು ರಾಜ್ಯದಲ್ಲಿ ಸರ್ಕಾರ ಇದೇಯೋ ಇಲ್ಲವೋ ಎಂಬ ಅನುಮಾನ ಮೂಡುವ ರೀತಿಯಲ್ಲಿ ಮಂದಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಶಾಸರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ. 20 ಮಂದಿ ಇರುವ ಮತ್ತೊಂದು ತಂಡ ಸಿಂಗ್ ಅವರನ್ನು ಭೇಟಿ ಮಾಡಲಿದ್ದು, ತಮ್ಮ ಅಭಿಪ್ರಾಯ ಸಲ್ಲಿಸಲು ಕಾತರದಿಂದ ಕಾಯುತ್ತಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ