ಧೀರ ಯೋಧ ಹನುಮಂತಪ್ಪ ಸಾವಿಗೆ ಸಂಪೂರ್ಣ ದೇಶ ಕಣ್ಣೀರಿಡುತ್ತಿದೆ. ತನ್ನ ಪತಿ ಒಮ್ಮೆ ಸಾವನ್ನು ಗೆದ್ದು ಬಂದಿದ್ದಾರೆ ಮತ್ತೆ ಅವರು ನಮ್ಮನ್ನು ಅಗಲಾರರು ಎಂಬ ಭರವಸೆಯನ್ನಿಟ್ಟುಕೊಂಡು ದೆಹಲಿಗೆ ಓಡಿದ್ದ ಅವರ ಪತ್ನಿ ಮಹಾದೇವಿ ತಮ್ಮ ಪತಿಯ ಶವದ ಜತೆ ಮರಳುವಂತಾಗಿದೆ. ಎಲ್ಲೆಲ್ಲೂ ಶೋಕ ಮಡುಗಟ್ಟಿದೆ. ಅವರ ಕುಟುಂಬದ ಸದಸ್ಯರು ತಮ್ಮ ಮನೆಯ ಬೆಳಕು ಕಂದಿ ಹೋಯಿತೆಂಬ ನೋವನ್ನು ನುಂಗಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಅವರ ಮನೆಯ ನಾಯಿಪಾಡು ಸಹ ಅಷ್ಟೇ. ದುಃಖದ ಕಡಲಲ್ಲಿ ಮುಳುಗಿ ಹೋಗಿದೆ.
ಮೂಕ ಪ್ರಾಣಿಗಳು ತಮ್ಮನ್ನು ಪ್ರೀತಿಸಿದವರು ಸತ್ತಾಗ ಮನುಷ್ಯರಿಗಿಂತ ಹೆಚ್ಚು ನೋವನ್ನು ಅನುಭವಿಸುತ್ತವಂತೆ. ಪ್ರೀತಿ ಪಾತ್ರರನ್ನು ಕಳೆದುಕೊಂಡು ಊಟ-ತಿಂಡಿಯನ್ನು ಬಿಟ್ಟು ರೋಧಿಸುವ ದೃಷ್ಟಾಂತಗಳು ನಮಗೆ ಬಹಳ ಸಿಗುತ್ತವೆ. ಇದು ಹನುಮಂತಪ್ಪ ಅವರ ಮನೆಯ ಸದಸ್ಯರಲ್ಲಿ ಒಂದಾಗಿರುವ ನಾಯಿ ರಾಜ. ಕಳೆದ ಜುಲೈ ತಿಂಗಳಲ್ಲಿ ಹನುಮಂತಪ್ಪಾ ಮನೆಗೆ ಬಂದಿದ್ದಾಗ ಇದೇ ಅವರ ಕೊನೆಯ ಭೇಟಿ ಆ ನಾಯಿಗೆ ಹೇಗೆ ತಿಳಿಯಲು ಸಾಧ್ಯ. ತನ್ನ ಮೈ ದಡವಿ ಹೋದ ಯಜಮಾನ ಇನ್ನಿಲ್ಲ ಎಂಬ ಸತ್ಯ ಅವನಿಗೆ ತಿಳಿಯಿತೋ ಗೊತ್ತಿಲ್ಲ. ಹನುಮಂತಪ್ಪ ಸಿಯಾಚಿನ್ನಲ್ಲಿ ನಾಪತ್ತೆಯಾದಾಗಿನಿಂದ ಈ ನಾಯಿ ಮೌನಕ್ಕೆ ಶರಣಾಗಿದೆ. ಕಳೆದ ಎಂಟು ದಿನಗಳಿಂದ ಕೊಟ್ಟಿಗೆಯ ಮೂಲೆಯಲ್ಲಿ ಕುಳಿತು ಮೂಕರೋಧನಗೈಯ್ಯುತ್ತಿದೆ. ತನ್ನ ಪ್ರೀತಿಪಾತ್ರ ದಣಿಯ ಸಾವಿಗೆ ಕೊರಗುತ್ತಿದೆ.