ಬಿರಿಯಾನಿಯಲ್ಲಿ ವಿಷ ಬೆರಸಿ ನಾಯಿ ಹತ್ಯೆ: ಇಬ್ಬರ ಬಂಧನ

ಶನಿವಾರ, 28 ಫೆಬ್ರವರಿ 2015 (18:27 IST)
ನಗರದ ಜೆ.ಜೆ.ನಗರದ ರಂಗನಾಥ ಕಾಲೋನಿಯಲ್ಲಿ ನಾಯಿಗಳಿಗೆ ಬಿರಿಯಾನಿ ಜೊತೆಯಲ್ಲಿ ವಿಷ ಬೆರೆಸಿ ಹತ್ಯೆಗೈದಿದ್ದ  ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಇಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 
 
ಬಂಧಿತ ಆರೋಪಿಗಳನ್ನು ಮೋಸನ್(22) ಮತ್ತು ಪ್ರಭಾಕರ್(25) ಎಂದು ಹೇಳಲಾಗಿದ್ದು, ನಗರದ ನಿವಾಸಿಗಳಾದ ಇವರು ಕಳ್ಳರು ಎನ್ನಲಾಗಿದೆ. ಪ್ರಕರಣದ ಹಿನ್ನೆಲೆ: ಕಳ್ಳತನದ ಕಸುಬನ್ನು ನೆಚ್ಚಿಕೊಂಡಿದ್ದ ಆರೋಪಿಗಳು, ದ್ವಿಚಕ್ರ ವಾಹನಗಳಲ್ಲಿನ ಬ್ಯಾಟರಿಗಳನ್ನು ಕದ್ದು ಮಾರಾಟ ಮಾಡಿ ಮಜಾ ಉಡಾಯಿಸುತ್ತಿದ್ದರು. ಕಳ್ಳತನವೇ ಇವರ ದೈನಂದಿನ ಕೆಲವಾಗಿತ್ತು ಎನ್ನಲಾಗಿದೆ. ಮಧ್ಯರಾತ್ರಿ ಕೈಗೊಳ್ಳುತ್ತದ್ದ ತಮ್ಮ ಕಸುಬಿಗೆ ಅಡಚಣೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿಗಳು ನಾಯಿಗಳಿಗೆ ಬಿರಿಯಾನಿಯಲ್ಲಿ ವಿಷ ಬೆರೆಸಿ ಕಸದ ಬುಟ್ಟಿಯಲ್ಲಿ ಹಾಕಿದ್ದರು. ಇದನ್ನು ತಿಂದ ಪರಿಣಾಮ ಐದು ನಾಯಿಗಳು ಹಾಗೂ ನಾಲ್ಕು ಕಾಗೆಗಳು ಸಾವನ್ನಪ್ಪಿದ್ದವು. ಈ ಹೃದಯ ವಿದ್ರಾವಕ ಘಟನೆಯು ಜ.5ರಂದು ನಡೆದಿತ್ತು. 
 
ಘಟನೆಯಿಂದ ದಿಗ್ಬ್ರಮೆಗೊಂಡ ಸ್ಥಳೀಯರು ಕಳ್ಳರೇ ಈ ಕೃತ್ಯವನ್ನು ಎಸಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಲ್ಲಿ ಆಗ್ರಹಿಸಿದ್ದರು. ಅಲ್ಲದೆ ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ