ಅತ್ಯಾಚಾರ ಸುದ್ದಿಗಳನ್ನು ಹೆಚ್ಚೆಚ್ಚು ಪ್ರಚಾರ ಮಾಡೋದು ಬೇಡ: ಅಂಬರೀಷ್

ಮಂಗಳವಾರ, 11 ನವೆಂಬರ್ 2014 (15:18 IST)
ಅತ್ಯಾಚಾರದ ಸುದ್ದಿಗಳನ್ನು ಮಾಧ್ಯಮಗಳು ಹೆಚ್ಚೆಚ್ಚು ಪ್ರಚಾರ ಮಾಡೋದು ಬೇಡ ಎಂದು ಮಂಡ್ಯ ಜಿಲ್ಲಾ ಉಸ್ತು ವಾರಿ ಸಚಿವ ಅಂಬರೀಷ್ ಇಂದು ಸಲಹೆ ಮಾಡಿದ್ದಾರೆ.  ಟಿಆರ್‌ಪಿ ಹೆಚ್ಚಳಕ್ಕಾಗಿ ಅತ್ಯಾಚಾರದ ಸುದ್ದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ ಎಂದು ಟಿ.ಜೆ. ಜಾರ್ಜ್ ಹೇಳಿಕೆ ನೀಡಿ ಟೀಕಾಪ್ರಹಾರಕ್ಕೆ ಗುರಿಯಾಗಿದ್ದರು.

ಬೆಂಗಳೂರಿನಿಂದ ಮನೆ ತೊರೆದು ಬಂದಿದ್ದ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಮಂಡ್ಯದ ಪಾಂಡವಪುರ ತಾಲೂಕಿನ ನೀಲನಹಳ್ಳಿ ಬಳಿ ಅತ್ಯಾಚಾರ ಮಾಡಿದ ಪ್ರಕರಣ ವರದಿಯಾಗಿದೆ. ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ ಯುವಕ ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್  ಸಣ್ಣ ತಪ್ಪಿನಿಂದ ಈ ಘಟನೆ ನಡೆದಿದೆ.

ಅತ್ಯಾಚಾರದ ವಿಷಯಗಳನ್ನು ಹೆಚ್ಚೆಚ್ಚು ಪ್ರಚಾರ ಮಾಡುವುದು ಬೇಡ. ಹಿಂದಿನ ಸರ್ಕಾರದಲ್ಲೂ ಇಂತಹ ಘಟನೆಗಳು ನಡೆದಿವೆ. ಆದರೆ ಈಗ ಮಾಧ್ಯಮಗಳು ಎಚ್ಚೆತ್ತುಕೊಂಡಿರುವುದರಿಂದ ಹೆಚ್ಚೆಚ್ಚು ಪ್ರಸಾರವಾಗುತ್ತಿದೆ ಎಂದು ಹೇಳಿದ್ದಾರೆ.

ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭೇಟಿ ಮಾಡಿದ ಕಿಮ್ಮನೆ ರತ್ನಾಕರ್ ಮತ್ತು ಅಂಬರೀಷ್ ಬಾಲಕಿಯ ಪೋಷಕರಿಗೆ ಸಾಂತ್ವನ ಹೇಳಿದರು.

ವೆಬ್ದುನಿಯಾವನ್ನು ಓದಿ