ಆರೋಪಿಗೆ ಹೆದರಿ ಅಪ್ಪನ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ ಮಗಳು.

ಗುರುವಾರ, 27 ನವೆಂಬರ್ 2014 (11:10 IST)
ಹಾಸನದ ಕೊಣನೂರಿನಲ್ಲಿ ಮಗಳ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಬಂಧಿತನಾಗಿದ್ದ ರಾಜಯ್ಯ ಎಂಬ ವ್ಯಕ್ತಿ ನಿರಪರಾಧಿ ಎಂದು ಸಾಬೀತಾಗಿದ್ದು, ಅವರು ಆರೋಪಮುಕ್ತರಾಗಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆರೋಪಿ ಹರೀಶ್ ಸಾಯಿಸುವ ಬೆದರಿಕೆ ಹಾಕಿದ್ದರಿಂದ ಅಪ್ಪನ ಮೇಲೆ ಆರೋಪ ಹೊರಿಸಿದ್ದಾಗಿ ಬಾಲಕಿ ತಪ್ಪೊಪ್ಪಿಕೊಂಡಿದ್ದಾಳೆ. 

ಡಿಎನ್​ಎ ಪರೀಕ್ಷೆಯಲ್ಲಿ  ರಾಜಯ್ಯ ತಮ್ಮ ಮಗಳ ಮೇಲೆ ಅತ್ಯಾಚಾರವೆಸಗಿಲ್ಲದಿರುವುದು ಸಾಬೀತಾಗಿದೆ. 
 
ಕಳೆದ ಜೂನ್ ತಿಂಗಳಲ್ಲಿ  ಕೊಣನೂರು ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಈ ಪ್ರಕರಣದಲ್ಲಿ, "ತಂದೆ ನನ್ನ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾರೆ. ಆ ಕಾರಣದಿಂದ ನಾನು ಗರ್ಭಿಣಿಯಾಗಿದ್ದೇನೆ ಎಂದು ಮಗಳು ಪ್ರಕರಣ ದಾಖಲಿಸಿದ್ದಳು. ಈ ಹಿನ್ನೆಲೆಯಲ್ಲಿ ತಂದೆ ರಾಜಯ್ಯನನ್ನು ಬಂಧಿಸಲಾಗಿತ್ತು. ಒಮ್ಮೆ ತಂದೆ ಅತ್ಯಾಚಾರವೆಸಗಿದ್ದಾಗಿ ಹೇಳಿದ್ದ ಬಾಲಕಿ, ಇನ್ನೊಮ್ಮೆ ಹರೀಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ" ಎಂದು ಹೇಳಿ ಗೊಂದಲ ಸೃಷ್ಟಿಸಿದ್ದಳು. 
 
ಆದರೆ ಡಿಎನ್​ಎ ಪರೀಕ್ಷೆಯಲ್ಲಿ ತಂದೆ ರಾಜಯ್ಯ ಅತ್ಯಾಚಾರವೆಸಗಿಲ್ಲ ಎಂಬುದು ಸಾಬೀತಾಗಿದೆ. 5 ತಿಂಗಳು ವಿಚಾರಣೆ ನಡೆಸಿದ ನ್ಯಾಯಾಲಯ ಆತನ ಬಿಡುಗಡೆಗೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಜೈಲಿನಿಂದ ರಾಜಯ್ಯ ಬಿಡುಗಡೆಗೊಂಡಿದ್ದಾನೆ.
 
ಆರೋಪಿ ಹರೀಶ್ ಕೊಲೆ ಮಾಡುವ ಬೆದರಿಕೆ ಹಾಕಿದ್ದರಿಂದ ತಂದೆ ಮೇಲೆ ಆರೋಪ ಮಾಡಿದ್ದಾಗಿ ಬಾಲಕಿ ತಪ್ಪೊಪ್ಪಿಕೊಂಡಿದ್ದಾಳೆ. ಈಗ  ಆರೋಪಿ ಹರೀಶ್ ಪೊಲೀಸರ ವಶದಲ್ಲಿದ್ದಾನೆ.

ವೆಬ್ದುನಿಯಾವನ್ನು ಓದಿ