ನೇಪಾಳದಲ್ಲಿ ಇಂದು ಬೆಳಗ್ಗೆ ಭಾರೀ ಪ್ರಮಾಣದ ಭೂ ಕಂಪನ ಸಂಭವಿಸಿದ್ದು, ಕರ್ನಾಟಕದ ಪ್ರವಾಸಿಗರು ಕೂಡ ನಗರದಲ್ಲಿ ಸಿಲುಕಿದ್ದು, ಭೂಕಂಪನ ಪರಿಣಾಮ ಪರಿತಪಿಸುತ್ತಿದ್ದಾರೆ.
ಮೂಲಗಳ ಪ್ರಕಾರ, ದಾವಣಗೆರೆ ನಗರದ 7 ಮಂದಿ ನಿವಾಸಿಗಳು ನೇಪಾಳಕ್ಕೆ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದ್ದು, ಭೂಕಂಪನದ ಪರಿಣಾಮ ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿ ದೇವಾಲಯದ ಆವರಣದಲ್ಲಿ ಸಿಲುಕಿದ್ದಾರೆ. ಸಿಲುಕಿರುವವರಲ್ಲಿ ಪರಿಮಳ, ರಾಘವೇಂದ್ರ, ಸೌಮ್ಯ ಸುಶೀಲಾ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಇವರು ನೇಪಾಳದ ಮುಕ್ತಿನಾಗದಿಂದ ಪೋಖ್ರಾಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಭೂಕಂಪನ ಸಂಭವಿಸಿದ್ದು, ಪೇಚಿಗೆ ಸಿಲುಕಿದ್ದಾರೆ. ಇನ್ನು ಇವರೊಂದಿಗೆ ರಾಜ್ಯದ 50 ಮಂದಿ ಇದ್ದ ಮತ್ತೊಂದು ತಂಡ ಕೂಡ ಇದ್ದು, ಈ ಎಲ್ಲರೂ ಕಠ್ಮಂಡುವಿನ ಪಶುಪತಿ ದೇವಾಲಯದ ಆವರಣದಲ್ಲಿದ್ದಾರೆ ಎಂಬುದಾಗಿ ಸಿಲುಕಿದ್ದಾರೆ.
ಬೆಂಗಳೂರು ಮೂಲದ ನಾಲ್ವರು ಮಂದಿ, ಕನಕಪುರ ರಸ್ತೆಯ ಅಜ್ಜನಪುರ ನಿವಾಸಿಗಳಾದ ರಮಾ, ಉಮಾ, ಬಾಲಕೃಷ್ಣ ಹಾಗೂ ಕುಮಾರಸ್ವಾಮಿ ಅವರೂ ಕೂಡ ನೇಪಾಳ ಪ್ರವಾಸ ಕೈಗೊಂಡಿದ್ದರು ಎನ್ನಲಾಗಿದ್ದು, ಇವರ ಸಂಪರ್ಕವೂ ಕೂಡ ಕಡಿತವಾಗಿದೆ. ಈ ನಾಲ್ವರೂ ಕೂಡ ಹಿರಿಯ ನಾಗರಿಕರಾಗಿದ್ದಾರೆ ಎನ್ನಲಾಗಿದೆ.