ಶಿಕ್ಷಣದ ವ್ಯಾಪಾರೀಕರಣ: ಸಮ್ಮೇಳನಾಧ್ಯಕ್ಷ ಸಿದ್ದಲಿಂಗಯ್ಯ ವಿಷಾದ

ಭಾನುವಾರ, 1 ಫೆಬ್ರವರಿ 2015 (13:35 IST)
ಗೊಮ್ಮಟನಗರಿ  ಶ್ರವಣಬೆಳಗೊಳದಲ್ಲಿ 81ನೇ ಸಾಹಿತ್ಯ ಸಮ್ಮೇಳನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿ ಮಾತನಾಡಿದ ಬಳಿಕ ಸಮ್ಮೇಳನಾಧ್ಯಕ್ಷರಾದ ಡಾ. ಸಿದ್ದಲಿಂಗಯ್ಯ ಕನ್ನಡ ಭಾಷೆಯ ಉಳಿವಿನ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.

ಪ್ರಾಥಮಿಕ ಶಾಲೆಗಳಲ್ಲಿ  ಕನ್ನಡವನ್ನು ಭಾಷಾ ಮಾಧ್ಯಮವಾಗಿ ತರಬೇಕೆಂದು ಒತ್ತಾಯಿಸಿದರು.  ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಬಡಮಕ್ಕಳು ಶಿಕ್ಷಣ ಪಡೆಯುವುದೇ ಇಂದಿನ ಕಾಲದಲ್ಲಿ ದುಸ್ತರವಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.

ಶಿಕ್ಷಣವು ಇಂದು ಬಂಡವಾಳ ಹೂಡಿಕೆಯ ಕ್ಷೇತ್ರವಾಗಿದ್ದು, ಒಂದು ದಂಧೆಯಾಗಿದೆ. ಹಣ ಮಾಡುವ ಉದ್ದೇಶದಿಂದಲೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿಯ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ ಶಿಕ್ಷಕರಿಗೆ ಸೂಕ್ತ ವೇತನ ಮತ್ತು ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸಿದ್ದಲಿಂಗಯ್ಯ ಹೇಳಿದರು.

ಆಡಳಿತಾಂಗದಲ್ಲಿ ಉನ್ನತ ಅಧಿಕಾರಿಗಳು ಇಂಗ್ಲೀಷ್ ಚಾಳಿಯನ್ನು ಇನ್ನೂ ಬಿಟ್ಟಿಲ್ಲ. ಅಂತಹವರಿಗೆ ಸಿಎಂ ಚಾಟಿ ಬೀಸಿರುವುದು ಅಭಿನಂದನೀಯ ಎಂದು ಸಿದ್ದಲಿಂಗಯ್ಯ ಹೇಳಿದರು.ಹೊಸ ಭಾಷಾ ನೀತಿ ರೂಪಿಸಿ ಮಾತೃಬಾಷೆ ಕಡ್ಡಾಯಗೊಳಿಸಬೇಕು ಎಂದು ಸಿದ್ದಲಿಂಗಯ್ಯ ಆಗ್ರಹಿಸಿದರು. ಕನ್ನಡ ಭಾಷೆ ಉಳಿಸಲು ಸಿಎಂ ಪ್ರಯತ್ನಿಸುತ್ತಿದ್ದು, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಮುಂದಾಗಿರುವುದು ಅಭಿನಂದನೀಯ ಎಂದು ಸಿದ್ದಲಿಂಗಯ್ಯ ಹೇಳಿದರು.

ವೆಬ್ದುನಿಯಾವನ್ನು ಓದಿ