ಚಳಿಗಾಲ ಅಧಿವೇಶನ ಅಂತ್ಯ: ಕಲಾಪದ ಬಗ್ಗೆ ಕಾಗೋಡು ಅಸಮಧಾನ

ಶನಿವಾರ, 20 ಡಿಸೆಂಬರ್ 2014 (16:35 IST)
ಸರ್ಕಾರ ಚಳಿಗಾಲದ ಅಧಿವೇಶನಕ್ಕಾಗಿ ನಿಗದಿಪಡಿಸಿದ್ದ 10 ದಿನಗಳ ಕಾಲಾವಧಿ ಇಂದಿಗೆ ಅಂತ್ಯಗೊಂಡಿದ್ದು, ಮಧ್ಯಾಹ್ನ 12 ಗಂಟೆಗೆ ಅಂತ್ಯಗೊಂಡಿರುವುದಾಗಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸ್ಪಷ್ಟಪಡಿಸಿದ್ದಾರೆ. 
 
ಕಲಾಪ ಅಂತ್ಯಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಪ್ರಭು ಅವರ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣದಿಂದ ಕಲಾಪಕ್ಕೆ ಆರಂಭದಲ್ಲಿಯೇ ಅಡ್ಡಿಯುಂಟಾಗಿತ್ತು. ಆದರೆ ಈ ವಾರದ ಆರು ದಿನವಾದರೂ ಸರಿಯಾಗಿ ಕಲಾಪ ನಡೆಸಿ ಹಲವು ವಿಷಯಗಳನ್ನು ಚರ್ಚಿಸಬೇಕೆಂದು ತೀರ್ಮಾನಸಿದ್ದೆ. ಆದರೆ ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ಧರಣಿ ಹಿನ್ನೆಲೆಯಲ್ಲಿ ಸಾಕಷ್ಟು ಸಮಯ ವ್ಯರ್ಥವಾಯಿತು ಎಂದು ಅಸಮಧಾನ ವ್ಯಕ್ತಪಡಿಸಿದರು. 
 
ಇನ್ನು ಸದನದಲ್ಲಿ ಒಟ್ಟು 14 ಮಸೂದೆಗಳಿಗೆ ಅಂಗೀಕಾರ ನೀಡುವ ಇರಾದೆ ಸರ್ಕಾರದ್ದಾಗಿತ್ತು. ಆದರೆ 11 ಮಸೂದೆಗಳನ್ನು ಅಂಗೀಕರಿಸುವಲ್ಲಿ ಸಫಲವಾಗಿದೆ ಎಂದ ಅವರು, ಉತ್ತರ ಕರ್ನಾಟಕ ಭಾಗದ ಹಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚೆಗಾಗಿ ಪಟ್ಟಿ ತಯಾರಿಸಿದ್ದೆ. ಆದರೆ ಕಲಾಪದಲ್ಲಿ ಸದಾ ಗದ್ದಲವೇ ಏರ್ಪಟ್ಟಿದ್ದರಿಂದ ಕಲಾಪ ಸಫಲತೆ ಕಂಡಿತು ಎಂದೇನೂ ಎನಿಸಿಲ್ಲ ಎಂದರು. ಈ ಕಲಾಪ ವಿಫಲವಾಗಲು ಎಲ್ಲಾ ಪಕ್ಷಗಳ ಎಲ್ಲಾ ಸದಸ್ಯರೂ ಕೂಡ ಕಾರಣರಾಗಿದ್ದಾರೆ ಎಂದು ದೂರಿದರು.  
ಇನ್ನು ತಾವು ಅಧ್ಯಕ್ಷ ಸ್ಥಾನದಲ್ಲಿದ್ದು ಕಳಂಕಿತ ಸಚಿವರ ಬಗ್ಗೆ ಚರ್ಚಿಸಲು ಏಕೆ ಅವಕಾಶ ನೀಡಲಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಮೂವರು ಸಚಿವರ ವಿರುದ್ಧದ ಹಲವು ಪ್ರಕರಣಗಳು ಲೋಕಾಯುಕ್ತ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಅಲ್ಲದೆ ನ್ಯಾಯಾಲಯದಲ್ಲಿವ ವಿಷಯಗಳನ್ನು ಸದನದಲ್ಲಿ ಚರ್ಚಿಸುವ ಅವಕಾಶ ನಿಯಮಾವಳಿಯಲ್ಲಿಲ್ಲ. ಹಾಗಾಗಿ ಚರ್ಚೆಗೆ ಅನುಮತಿ ನೀಡದೆ ನಿರಾಕರಿಸಬೇಕಾಯಿತು ಎಂದರು. 

ವೆಬ್ದುನಿಯಾವನ್ನು ಓದಿ