ಗುಂಜನೂರು ಗ್ರಾಮದ ನಿವಾಸಿಯಾಗಿದ್ದ ತಾಯವ್ವ ಪತಿ ಗುಂಜಾಲಪ್ಪ ಪಾಲುದಾರಿಕೆಯಲ್ಲಿ ಕೃಷಿ ಮಾಡುತ್ತಿದ್ದರು. ವಿಪರೀತ ಸಾಲ ಮಾಡಿಕೊಂಡಿದ್ದ ದಂಪತಿ ತೊಗರಿ ಮತ್ತು ಹೆಸರು ಬೇಳೆ ಬಿತ್ತಿದ್ದರು. ಆದರೆ ಮಳೆ ಕೈಕೊಟ್ಟ ಪರಿಣಾಮ ಬೆಳೆಯೂ ಕೆಗೆಟುಕಲಿಲ್ಲ. ತಾನು ಪಡೆದಿದ್ದ 4 ಲಕ್ಷ ಸಾಲ ತೀರಿಸಲಾಗದ ಕೊರಗಿನಿಂದ ತಾಯವ್ವ ನಿನ್ನೇ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಯತ್ನ ಮಾಡಿದ್ದರು. ಅವರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಸಾವನ್ನಪ್ಪಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಬ್ಯಾಡರಹಳ್ಳಿಯಲ್ಲಿ 22 ವರ್ಷದ ರೈತ ದೇವರಾಜು ಕೂಡ ಸಾಲಬಾಧೆಯಲ್ಲಿ ಬೆಂದು ನೇಣಿಗೆ ಕೊರಳೊಡ್ಡಿದ್ದಾರೆ. ದೇವರಾಜು ಕಬ್ಬು, ರಾಗಿ ಹಾಗೂ ಬೀನ್ಸ್ ಬೆಳೆ ಬೆಳೆದಿದ್ದರು. ಇದಕ್ಕಾಗಿ 4 ಲಕ್ಷ ಕೈ ಸಾಲ ಮಾಡಿಕೊಂಡಿದ್ದರು. ಆದರೆ ರಾಗಿ ಮತ್ತು ಬೀನ್ಸ್ ಬೆಳೆ ಕೈಕೊಟ್ಟಿತ್ತು. ಕಬ್ಬು ಕಟಾವಿಗೆ ಬಂದಿಲ್ಲ. ಇದರಿಂದ ದಿಕ್ಕು ಕಾಣದಾದ ಯುವರೈತ ದೇವರಾಜು ಜಮೀನಿನ ಬಳಿಯಿದ್ದ ಸೇತುವೆಗೆ ನೇಣು ಬಿಗಿದುಕೊಂಡು ಪ್ರಾಣ ತೆತ್ತಿದ್ದಾನೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.