ಮರ್ಯಾದಾ ಹತ್ಯೆ: ಸೈನಿಕನಾಗಿದ್ದ ಮಗನನ್ನು ಕೊಂದ ತಂದೆ

ಸೋಮವಾರ, 12 ಜನವರಿ 2015 (14:36 IST)
ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಾನೆ ಎಂಬ ಕಾರಣಕ್ಕೆತಂದೆಯೇ ಮಗನನ್ನು ಕೊಂದ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ರೋನಿಹಾಳದಲ್ಲಿ ನಡೆದಿದೆ. ಇದೊಂದು ಮರ್ಯಾದಾ ಹತ್ಯೆಯಾಗಿ ಬಿಂಬಿತವಾಗಿದೆ.
ಜಮ್ಮುವಿನಲ್ಲಿ  ಯೋಧನಾಗಿದ್ದ 25 ವರ್ಷದ ಮಹಾಂತೇಶ್ ಎಂಬಾತನೇ  ಹೆತ್ತ  ತಂದೆಯಿಂದ ಹತ್ಯೆಯಾದ ದುರ್ದೈವಿಯಾಗಿದ್ದಾನೆ.
 
ಕಳೆದ 4 ವರ್ಷಗಳಿಂದ ಜಮ್ಮುವಿನಲ್ಲಿ ಸೈನಿಕನಾಗಿ ಕೆಲಸ ಮಾಡುತ್ತಿದ್ದ ಮಹಾಂತೇಶ್ ಅಲ್ಲಿಯೇ  ಅನ್ಯ ಧರ್ಮದ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯನ್ನು ಮರೆತು ಬಿಡುವಂತೆ ತಂದೆ ಒತ್ತಡ ಹೇರಿದ್ದ. ಆದರೆ ಮಹಾಂತೇಶ್ ಅಪ್ಪನ ಮಾತಿಗೆ ಒಪ್ಪದೇ ತನ್ನ ಪ್ರೇಮವನ್ನು ಮುಂದುವರೆಸಿದ್ದ ಮತ್ತು ಆಕೆಯನ್ನು ಮದುವೆಯಾಗಲು ಮುಂದಾಗಿದ್ದ.

ರಜೆಯ ಮೇಲೆ ಮನೆಗೆ ಹಿಂತಿರುಗಿದ್ದ ಮಗ ಮತ್ತು ತಂದೆಯ ನಡುವೆ ಇಂದು ಬೆಳಿಗ್ಗೆ  ಇದೇ ವಿಷಯಕ್ಕೆ ವಾದವಾಗಿದೆ. ತನ್ನ ಹಠವನ್ನು ಮುಂದುವರೆಸಿದ ಮಗ ತನಗೆ ಸೇರಬೇಕಾದ ಆಸ್ತಿಯನ್ನು ಕೊಟ್ಟು ಬಿಡಿ. ನಾನು ಪ್ರೀತಿಸಿದವಳೊಂದಿಗೆ ಜಮ್ಮುವಿನಲ್ಲಿ  ಸಂಸಾರ ಮಾಡುತ್ತೇನೆ. ಇದರಿಂದ ಸಿಟ್ಟಿಗೆದ್ದ ತಂದೆ ಮಹದೇವ್ ಮಾರಕಾಸ್ತ್ರಗಳಿಂದ ಮಗನ ಮೇಲೆ ದಾಳಿ ಮಾಡಿ ಭೀಕರವಾಗಿ ಕೊಲೆಗೈದಿದ್ದಾನೆ ಮತ್ತು ಪೊಲೀಸರಿಗೆ ಶರಣಾಗಿದ್ದಾನೆ. 
 
ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ