ಹೆತ್ತ ತಂದೆಯಿಂದಲೇ ಇಬ್ಬರು ಮಕ್ಕಳ ಹತ್ಯೆ

ಸೋಮವಾರ, 22 ಫೆಬ್ರವರಿ 2016 (10:43 IST)
ಹೆತ್ತ ತಂದೆಯೇ ತನ್ನ ಇಬ್ಬರು ಮಕ್ಕಳನ್ನು ಹತ್ಯೆಗೈದು ಮೋರಿಗೆಸೆದ ಕರಾಳ ಘಟನೆ ನಗರದ ಕೆ.ಪಿ. ಅಗ್ರಹಾರದಲ್ಲಿ ನಡೆದಿದೆ. 
 
ಮಕ್ಕಳನ್ನು ಹತ್ಯೆಗೈದ ತಂದೆ ಶಿವಕುಮಾರ್‌ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದ್ದು‌‌‌ ಮೃತರನ್ನು ಪವನ್ ಕುಮಾರ್(9) ಮತ್ತು ಸಿಂಚನಾ(6) ಎಂದು ಗುರುತಿಸಲಾಗಿದೆ.
 
ಶಿವಕುಮಾರ 11 ವರ್ಷಗಳ ಹಿಂದೆ ತಾಯಮ್ಮ ಎಂಬುವವಳನ್ನು ಮದುವೆಯಾಗಿದ್ದ.ಆರೋಪಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಸದಾ ಮನೆಯಲ್ಲೇ ಕುಳಿತಿರುತ್ತಿದ್ದ. ಪತ್ನಿ ತಾಯಮ್ಮ ಶಿವಕುಮಾರನಿಗೆ ಮಕ್ಕಳ ಸ್ಕೂಲ್ ಫೀಸ್ ಕಟ್ಟುವಂತೆ ಹೇಳಿದ್ದಳು. ಆದರೆ ಇದೇ ತನ್ನ ಮಕ್ಕಳ ಪಾಲಿಗೆ ಸಾವಾಗಲಿದೆ ಎಂಬ ಕಲ್ಪನೆ ಅವಳಿಗಿರಲಿಲ್ಲ. ಕಳೆದ ಶನಿವಾರ ಸ್ಕೂಲ್ ಡೇ ಮುಗಿಸಿಕೊಂಡು ಬಂದು ಮಕ್ಕಳು ಮನೆಯಲ್ಲಿ ಆಟವಾಡ್ತಿದ್ದರು. ಈ ವೇಳೆ ಮನೆಗೆ ಬಂದ ಶಿವಕುಮಾರ ಇಬ್ಬರು ಮಕ್ಕಳ ಬಾಯಿಗೆ ಬಟ್ಟೆ ತುರುಕಿ, ಕೈ ಕಾಲು ಕಟ್ಟಿ, ಚಾಕುವಿನಿಂದ ಇರಿದು ಕೊಲೆ ಮಾಡಿ ಮನೆ ಹತ್ತಿರದ ಮೋರಿಯಲ್ಲಿ ಬಿಸಾಕಿ ಮಲೆ ಮಹದೇಶ್ವರಕ್ಕೆ ಬಸ್ ಹತ್ತಿದ್ದಾನೆ.
 
ಕೆಲಸ ಮುಗಿಸಿ ಮನೆಗೆ ಬಂದ ತಾಯಮ್ಮ ಮಕ್ಕಳನ್ನು ಹುಡುಕಿ ಹುಡುಕ ಸುಸ್ತಾಗಿ ಗಂಡನಿಗೆ ಫೋನ್ ಕರೆ ಮಾಡಿದಾಗ ಮಕ್ಕಳ ನನ್ನ ಜತೆ ಇದ್ದಾರೆ ಎಂದು ಹೇಳಿದ್ದಾನೆ. ಆದರೆ ಅನುಮಾನಗೊಂಡ ತಾಯವ್ವ ನಿಜ ಹೇಳು ಪೊಲೀಸರಲ್ಲಿ ದೂರು ನೀಡುತ್ತೇನೆ ಎಂದಾಗ ತಾನು ನಡೆಸಿದ ಕುಕೃತ್ಯವನ್ನು ಬಯಲು ಮಾಡಿದ್ದಾನೆ.
 
ಫೀಸು ಕಟ್ಟೋಕೆ ದುಡ್ಡಿರಲಿಲ್ಲ, ಮಕ್ಕಳೆ ಇರದಿದ್ರೆ ಫೀಸ್ ಕಟ್ಟೋ ಚಿಂತೆ ಇರಲ್ಲ ಎಂದು ಈ ಕೃತ್ಯವನ್ನು ಎಸಗಿದ್ದೇನೆ ಎಂದು ಪಾಪಿ ತಂದೆ ತಪ್ಪೊಪ್ಪಿಕೊಂಡಿದ್ದಾನೆ
 
ಕೆಪಿ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 
 
ಮಕ್ಕಳ ಮೃತದೇಹಗಳನ್ನ ಮೋರಿಯಿಂದ ಮೇಲೆತ್ತಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ವೆಬ್ದುನಿಯಾವನ್ನು ಓದಿ