ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುತ್ತಿರುವ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವರಕೋಡು ಗ್ರಾಮ ಪಂಚಾಯತ್ ನಲ್ಲಿ ಈ ಘಟನೆ ಜರುಗಿದ್ದು, 6 ಸ್ಥಾನಗಳ ಪೈಕಿ 19 ಮಂದಿ ಅಭ್ಯರ್ಥಿಗಳು ಚುನಾವಣಾ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಕೊಟ್ಟ ಮಾತಿನಂತೆ ನಡೆದು ಕೊಳ್ಳದೆ ಗ್ರಾಮವನ್ನು ಪಂಚಾಯತ್ ಕೇಂದ್ರ ಸ್ಥಾನವನ್ನಾಗಿ ಮಾಡಲಿಲ್ಲ ಎಂದು ಬೇಸರಗೊಂಡು ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳೂ ಕೂಡ ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರೊಬ್ಬರೂ ಕಣದಲ್ಲಿಲ್ಲದ ಕಾರಣ ಮತದಾನ ಸ್ಥಗಿತಗೊಂಡಿದೆ.
ಇನ್ನು ಮಾಧ್ಯಗಳೊಂದಿಗೆ ಮಾತನಾಡಿರುವ ಗ್ರಾಮಸ್ಥರು, ಈ ಹಿಂದೆ ಗ್ರಾಮಸ್ಥರ ಒಕ್ಕೊರಲಿಗೆ ಧ್ವನಿಗೂಡಿಸಿದ್ದ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರು ಗ್ರಾಮವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಲು ಒಪ್ಪಿಗೆ ಸೂಚಿಸಿ ಭರವಸೆ ನೀಡಿದ್ದರು. ಆದರೆ ನಮ್ಮ ಗ್ರಾಮಕ್ಕೆ ನೀಡಬೇಕಿದ್ದ ಸ್ಥಾನಮಾನವನ್ನು ಪಕ್ಕದ ಬಡಗಲ ಹೊಂಡಿ ಗ್ರಾಮಕ್ಕೆ ನೀಡಲಾಗಿದೆ. ಈ ಮೂಲಕ ಅಧಿಕಾರಿಗಳು ಮಾತಿಗೆ ಕದ್ದಿದ್ದು, ಬೇಸರವಾಗಿದೆ. ಇದೇ ಕಾರಣಕ್ಕೆ ನಾಮಪತ್ರವನ್ನು ಹಿಂಪಡೆದಿದ್ದೇವೆ. ಅಲ್ಲದೆ ಈ ಪಂಚಾಯತ್ ಮಾನ್ಯ ಮುಖ್ಯಮಂತ್ರಿಗಳ ಕ್ಷೇತ್ರವಾಗಿರುವ ಕಾರಣ ಈ ಸಂಬಂಧ ಅವರೂ ಪ್ರತಿಕ್ರಿಯಿಸಲಿ ಎಂದಿದ್ದಾರೆ.
ಈ ಗ್ರಾಮದ ಜನಸಂಖ್ಯೆಗನುಗುಣವಾಗಿ ಗ್ರಾಮ ಪಂಚಾಯತ್ ಸ್ಥಾನಗಳನ್ನು ಸೃಷ್ಟಿಸಲಾಗಿದ್ದು, 6 ಮಂದಿ ಸದಸ್ಯರು ಆಯ್ಕೆಯಾಗಬೇಕಿತ್ತು. ಆದರೆ ನಾಮಪತ್ರ ವಾಪಾಸ್ ಪಡೆದಿರುವ ಹಿನ್ನೆಲೆಯಲ್ಲಿ ಯಾವೂಬ್ಬ ಅಭ್ಯರ್ಥಿಯೂ ಕಣದಲ್ಲಿಲ್ಲ. ಇದರಿಂದ ಮತದಾನ ಸ್ಥಗಿತಗೊಂಡಿದೆ.