ಅಕ್ರಮವಾಗಿ ತಲೆ ಎತ್ತಿದ್ದ ಶಕ್ತಿ ರೆಸಾರ್ಟ್ ಜಿಲ್ಲಾಡಳಿತದ ವಶಕ್ಕೆ

ಶನಿವಾರ, 1 ಆಗಸ್ಟ್ 2015 (14:56 IST)
ಬೆಂಗಳೂರು ದಕ್ಷಿಣ ವಲಯದಲ್ಲಿ ಬರುವ ರಾಜರಾಜೇಶ್ವರಿ ನಗದರ ವಡ್ಡರ ಪಾಳ್ಯದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಶಕ್ತಿ ಹಿಲ್ಸ್ ರೆಸಾರ್ಟ್‌ನ್ನು ದಕ್ಷಿಣ ವಿಭಾಗದ ತಹಶಿಲ್ದಾರ್ ಡಾ. ಬಿ.ಆರ್.ದಯಾನಂದ್ ಅವರು ಕಾರ್ಯಚರಣೆ ನಡೆಸುವ ಮೂಲಕ ವಶಕ್ಕೆ ಪಡೆದಿದ್ದಾರೆ.  
 
ಇಲ್ಲಿನ ಸರ್ವೇ ನಂ. 8ರಲ್ಲಿದ್ದ 6 ಎಕರೆ 1 ಗುಂಟೆ ಸ್ರಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಶಕ್ತಿ ಹಿಲ್ಸ್ ಎಂಬ ಹೆಸರಿನಲ್ಲಿ ಬೃಹತ್ ಗಾತ್ರದ ರೆಸಾರ್ಟ್‌ನ್ನು ನಿರ್ಮಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿದ ತಹಶೀಲ್ದಾರ್ ಅಕ್ರಮವನ್ನು ಪತ್ತೆ ಹಚ್ಚಿದ್ದು, ಇಂದು ಪೊಲೀಸ್ ಭಧ್ರತೆಯೊಂದಿಗೆ ವಶಕ್ಕೆ ಪಡೆದಿದ್ದಾರೆ.  
 
ಸೂಕ್ತ ಭದ್ರತೆಯೊಂದಿಗೆ ಆಗಮಿಸಿದ ಅಧಿಕಾರಿಗಳು ಈಗಾಗಲೇ ರೆಸಾರ್ಟ್‌ಗೆ ಬೀಗ ಮುದ್ರೆಯನ್ನು ಜಡಿದಿದ್ದು, ಇದರಲ್ಲಿನ 15 ಕೊಠಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಇದೇ ಜಾಗದಲ್ಲಿ ಪ್ರಖ್ಯಾತ ಷಣ್ಮುಘ ದೇವಸ್ಥಾನವನ್ನೂ ಕೂಡ ನಿರ್ಮಿಸಿದ್ದು, ಇದೂ ಕೂಡ ಅಕ್ರಮ ಜಾಗದಲ್ಲಿಯೇ ನಿರ್ಮಾಣಗೊಂಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನವನ್ನೂ ಕೂಡ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ