ಮಠಗಳ ವಶಕ್ಕೆ ಸರ್ಕಾರ ಚಿಂತನೆ: ಮಠಾಧೀಶರ ಆಕ್ರೋಶ

ಸೋಮವಾರ, 22 ಡಿಸೆಂಬರ್ 2014 (16:23 IST)
ಮಠಗಳನ್ನು ವಶಕ್ಕೆ ಪಡೆಯುವ ವಿಧೇಯಕವನ್ನು ಮಂಡಿಸಲು ಸರ್ಕಾರ ಮುಂದಾಗಿದ್ದು, ಸರ್ಕಾರದ ಈ ನಿರ್ಧಾರ ಸರಿಯಲ್ಲ ಎಂದು ಚಿತ್ರದುರ್ಗ ಜಿಲ್ಲೆಯ ಮುರುಘಾ ಮಠದ ಶಿವಮೂರ್ತಿ ಮುರುಘಾಶ್ರೀ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. 
 
ಜಿಲ್ಲೆಯ ಭಾಲ್ಕಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ವಿಧೇಯಕವನ್ನು ಮಂಡಿಸುವ ಮೂಲಕ ಮಠಗಳ ಮೇಲೆ ಅಧಿಪತ್ಯವನ್ನು ಸ್ಥಾಪಿಸಲು ಹೊರಟಿದ್ದು, ಸರ್ಕಾರದ ಈ ನಿರ್ಧಾರ ಸರಿಯಲ್ಲ. ಸರ್ಕಾರದ ವಿರುದ್ಧ ನಾವು ಪ್ರತಿಭಟಿಸುತ್ತೇವೆ. ಪ್ರತಿಭಟನೆಗೂ ಮುನ್ನ ರಾಜ್ಯದ ಇತರೆ ಮಠಗಳ ಮಠಾಧೀಶರೊಂದಿಗೆ ಚರ್ಚಿಸಲಿದ್ದು, ಆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು. 
 
ಇನ್ನು ಈ ಬಗ್ಗೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು, ಒಬ್ಬರ ದೂರಿನ ಮೇಲೆ ಸರ್ಕಾರ ವಿಧೇಯಕವನ್ನು ಮಂಡಿಸಲು ಹೊರಟಿದ್ದು, ಸರ್ಕಾರ ಮಠಗಳ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಅಧಿಪತ್ಯವನ್ನು ಸ್ಥಾಪಿಸಲು ಹೊರಟಿದೆ. ಮಠ ಎಂದರೆ ಸಣ್ಣ ಪುಟ್ಟ ಸಮಸ್ಯೆಗಳಿರುವುದು ಸರ್ವೇ ಸಾಮಾನ್ಯ. ಹೀಗಿರುವಾಗ ಮಠಗಳನ್ನು ವಶಕ್ಕೆ ಪಡೆಯುವುದು ಸರಿಯಲ್ಲ. ಅಲ್ಲದೆ ಸರ್ಕಾರ ಕೇವಲ ಮಠಗಳ ಮೇಲೆ ಮಾತ್ರ ಏಕೆ ಕಾರ್ಯ ಸಾಧನೆ ಮಾಡಲು ಹೊರಟಿದೆ ಎಂದು ಪ್ರಶ್ನಿಸಿರುವ ಅವರು, ಇತರೆ ಧರ್ಮಗಳ ಪ್ರಾರ್ಥನಾ ಮಂದಿರಗಳು ಸರ್ಕಾರಕ್ಕ ಕಾಣಿಸಲಿಲ್ಲವೇ ಎಂದು ಮಾರ್ಮಿಕವಾಗಿ ನುಡಿದಿದ್ದು, ಸರ್ಕಾರದ ವಿರುದ್ಧ ನಾವು ಹೋರಾಟ ಮಾಡಲಿದ್ದೇವೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ