ಗ್ರಾಮ ಪಂಚಾಯತ್ ಚುನಾವಣೆ: ಅಭ್ಯರ್ಥಿಯ ಕೊಲೆ

ಶುಕ್ರವಾರ, 29 ಮೇ 2015 (09:41 IST)
ಕೋಲಾರ್  ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೋರ್ವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸುಬ್ರಮಣಿ ಎಂಬುವವರೇ ಕೊಲೆಯಾದ ದುರ್ದೈವಿಯಾಗಿದ್ದು ಇವರು ಮುಳಬಾಗಿಲು ತಾಲ್ಲೂಕಿನ ಬಲ್ಲಾ ಗ್ರಾಮ ಪಂಚಾಯತ್‌ನಲ್ಲಿ ಕಣಕ್ಕಿಳಿದಿದ್ದರು. ಅವರು ಗ್ರಾಮ್ ಪಂಚಾಯತ್ ಮಾಜಿ ಸದಸ್ಯರಾಗಿದ್ದು, ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಅವರನ್ನು ಕೊಲೆಗೈಯ್ಯಲಾಗಿದೆ ಎಂದು ಶಂಕಿಸಲಾಗಿದೆ.

ಮುಳಬಾಗಿಲಿನಿಂದ ತನ್ನ ಗ್ರಾಮ ಬಲ್ಲಾಕ್ಕೆ ಗುರುವಾರ ರಾತ್ರಿ ಬೈಕ್‍ನಲ್ಲಿ ಮರಳುತ್ತಿದ್ದ ವೇಳೆ ಮುಳಬಾಗಿಲು ಹೊರವಲಯದ ಕೆಜಿಎಫ್ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಟಾಟಾ ಸುಮೋದಲ್ಲಿ ಬಂದ ಮೂವರ ತಂಡ ಏಕಾಏಕಿ ಸುಬ್ರಮಣಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿತು.
 
ಸುಬ್ರಮಣಿ ತಮ್ಮ ಗ್ರಾಮದ ಕಾಂಗ್ರೆಸ್ ಮುಖಂಡ ರಾಮಕೃಷ್ಣಪ್ಪ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ನಡೆದ ಈ ಪ್ರಕರಣದಲ್ಲಿ ಅವರು ಖುಲಾಸೆಯಾಗಿದ್ದರು. 
 
ಸ್ಥಳಕ್ಕೆ ಮುಳಬಾಗಿಲು ಪೊಲೀಸರು ಹಾಗೂ ಎಸ್ಪಿ ಅಜಯ್ ಹಿಲೋರಿ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಹರೀಶ್ ಎಂಬಾತನನ್ನು ಬಂಧಿಸಲಾಗಿದೆ.
 
ಸುಬ್ರಮಣಿ ಕೊಲೆಯಿಂದ ಉದ್ರಿಕ್ತರಾಗಿರುವ ಅವರ ಬೆಂಬಲಿಗರು ಪ್ರತಿಸ್ಪರ್ಧಿ ಅನಿತಾ ಅವರ ಸಂಬಂಧಿಕರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಎರಡು ಮನೆಗಳನ್ನು ಸಂಪೂರ್ಣ ಕೆಡವಲಾಗಿದ್ದು, 5 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಮನೆ ಮುಂದೆ ನಿಂತಿದ್ದ ಟ್ರಾಕ್ಟರ್ ಮತ್ತು ಆಟೋ ಮತ್ತು ಹಲವು ವಸ್ತುಗಳನ್ನು ಸುಟ್ಟು ಹಾಕಲಾಗಿದೆ.
 
ಗ್ರಾಮದಲ್ಲಿ ಉಂಟಾಗಿರುವ ಬಿಗುವಿನ ಮಾತಾವರಣ ನಿಯಂತ್ರಿಸಲು ಪೊಲೀಸ್ ಪಡೆಯನ್ನು ನಿಯೋಜನೆಗೊಳಿಸಲಾಗಿದೆ. 

ವೆಬ್ದುನಿಯಾವನ್ನು ಓದಿ