ಗ್ರಾಮಪಂಚಾಯತ್ ಸದಸ್ಯೆ ಪತಿ ಬರ್ಬರ ಹತ್ಯೆ

ಭಾನುವಾರ, 21 ಫೆಬ್ರವರಿ 2016 (12:34 IST)
ಗ್ರಾಮಪಂಚಾಯತ್ ಸದಸ್ಯೆಯೊಬ್ಬಳ ಪತಿಯನ್ನು ದುಷ್ಕರ್ಮಿಗಳು ಕೊಚ್ಚಿ ಕೊಂದು ಹಾಕಿದ ಭೀಕರ ಘಟನೆ ವಡೇರಹಳ್ಳಿ ಬಳಿಯ ಶಾಮರಾಜಪುರದಲ್ಲಿ ಶನಿವಾರ ರಾತ್ರಿ ನಡೆದಿದೆ. 
 
ನಿನ್ನೆ ರಾತ್ರಿ ತಮ್ಮ ಕಚೇರಿಯಲ್ಲಿದ್ದ ಪುರುಷೋತ್ತಮ್ (41) ಅವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಪುರುಷೋತ್ತಮ್ ಹೊರಗೋಡಿದ್ದಾರೆ. ಆದರೆ ಅಟ್ಟಾಡಿಸಿಕೊಂಡು ಹೋದ ದುರುಳರು ಹತ್ತಿರದ ಹೊಲವೊಂದರಲ್ಲಿ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಪ್ರತಿದಿನ ಕಾರಿನಲ್ಲಿ ಬರುತ್ತಿದ್ದ ಪುರುಷೋತ್ತಮ್ ನಿನ್ನೆ ಬೈಕ್‌ನಲ್ಲಿ ಕಚೇರಿಗೆ ಬಂದಿದ್ದನ್ನು ಗಮನಿಸಿಕೊಂಡಿದ್ದ ದುಷ್ಕರ್ಮಿಗಳು ಅವರು ಒಬ್ಬರೆ ಇರುವುದನ್ನು ಗೊತ್ತುಪಡಿಸಿಕೊಂಡಿಯೇ ದಾಳಿ ಮಾಡಿದ್ದಾರೆ.
 
ಸ್ಥಳಕ್ಕೆ ಭೇಟಿ ನೀಡಿರುವ ಯಲಹಂಕ ಉಪನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  
 
ಕೊಲೆಯಾದ ಪುರುಷೋತ್ತಮ್‌ ಯಲಹಂಕ ವಡೇರಹಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಭಾರತಿ ಅವರ ಪತಿಯಾಗಿದ್ದು, ಕೇಬಲ್ ನೆಟ್‌ವರ್ಕ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು.  ವ್ಯವಹಾರದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದ್ದು ಪೊಲೀಸರು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ