ಗ್ರಾಮ ಪಂಚಾಯತ್ ಸದಸ್ಯೆ ಪತಿ ಕೊಲೆ ಪ್ರಕರಣ: ಆರೋಪಿಗಳ ಬಂಧನ

ಸೋಮವಾರ, 22 ಫೆಬ್ರವರಿ 2016 (09:18 IST)
ವಡೇರಹಳ್ಳಿ ಬಳಿಯ ಶಾಮರಾಜಪುರದಲ್ಲಿ ಶನಿವಾರ ರಾತ್ರಿ ನಡೆದ ಗ್ರಾಮಪಂಚಾಯತ್ ಸದಸ್ಯೆ ಭಾರತಿ ಪತಿ ಪುರುಷೋತ್ತಮ್ (41) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 
 
ಆರೋಪಿಗಳನ್ನು ಜಗದೀಶ್, ನಕುಲ್, ಕುಮಾರಸ್ವಾಮಿ, ಅನಿಲ್ ಎಂದು ಗುರುತಿಸಲಾಗಿದ್ದು ಇವರು ಕೊಲೆಯಾದ ಪುರುಷೋತ್ತಮ್ ಸ್ನೇಹಿತರೆ ಎಂದು ತಿಳಿದು ಬಂದಿದೆ. ಶನಿವಾರ ರಾತ್ರಿ ಪುರುಷೋತ್ತಮ್ ಅವರ ಕಚೇರಿಗೆ ಬಂದ ನಾಲ್ವರು ಆರೋಪಿಗಳು ತಡರಾತ್ರಿಯವರೆಗೂ ಕುಡಿದು ಪಾರ್ಟಿ ಮಾಡಿದ್ದಾರೆ.
 
ಕುಡಿದ ಅಮಲಿನಲ್ಲಿದ್ದ ನಾಲ್ಕು ಜನ ಸ್ನೇಹಿತರು ಪುರುಷೋತ್ತಮ್ ಅವರ ಜೊತೆ ಜಗಳಕ್ಕೀಡಾಗಿದ್ದರು. ಜಗಳ ವಿಕೋಪಕ್ಕೆ ತಿರುಗಿದಾಗ ಮದ್ಯದ ಅಮಲಿನಲ್ಲಿ ಪುರುಷೋತ್ತಮ ಮೇಲೆ ದಾಳಿ ನಡೆಸಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಪುರುಷೋತ್ತಮ್ ಹೊರಗೋಡಿ ಹೋದಾಗ ಅಟ್ಟಾಡಿಸಿಕೊಂಡು ಹೋಗಿ ಪಕ್ಕದ ಜಮೀನಿನಲ್ಲಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ  ಮಾಡಿದ್ದಾರೆ.
 
ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ಪೊಲೀಸರು ವಿಚಾರಣೆಯನ್ನು ಮುಂದುವರೆಸಿದ್ದಾರೆ. 
 
ಕೊಲೆಯಾದ ಪುರುಷೋತ್ತಮ್‌ ಯಲಹಂಕ ವಡೇರಹಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಭಾರತಿ ಅವರ ಪತಿಯಾಗಿದ್ದು, ಕೇಬಲ್ ನೆಟ್‌ವರ್ಕ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. 

ವೆಬ್ದುನಿಯಾವನ್ನು ಓದಿ