ರಾಘವೇಶ್ವರ ಶ್ರೀಗಳ ಪೀಠತ್ಯಾಗಕ್ಕೆ ಹವ್ಯಕ ಸಮುದಾಯ ಒತ್ತಾಯ

ಶನಿವಾರ, 24 ಅಕ್ಟೋಬರ್ 2015 (12:54 IST)
ಶಿವಮೊಗ್ಗ ಜಿಲ್ಲೆಯ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ರಾಘವೇಶ್ವರ ಭಾರತಿ ಶ್ರೀಗಳ ವಿರುದ್ಧ ಎರಡು ಅತ್ಯಾಚಾರ ಆರೋಪಗಳಿದ್ದು, ಈಗಾಗಲೇ ಚಾರ್ಜ್ ಶೀಟ್ ಕೂಡ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಪೀಠತ್ಯಾಗ ಮಾಡಲಿ ಎಂದು ಸಮಾನ ಮನಸ್ಕರ ಹವ್ಯಕ ವೇದಿಕೆಯ ಸದಸ್ಯರು ಇಂದು ಒತ್ತಾಯಿಸಿದ್ದಾರೆ. 
 
ನಗರದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ವೇದಿಕೆಯ ಗೌರವಾಧ್ಯಕ್ಷ ಕೆ.ಹೆಚ್.ಶ್ರೀನಿವಾಸ್, ಶ್ರೀಗಳ ವಿರುದ್ಧ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಈಗಾಗಲೇ ಆರೋಪ ಪಟ್ಟಿಯನ್ನೂ ಕೂಡ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಪೀಠದಲ್ಲಿ ಮುಂದುವರಿಯಲು ಅನರ್ಹರು. ಆದ ಕಾರಣ ಕೂಡಲೇ ಅವರು ಪೀಠತ್ಯಾಗ ಮಾಡಲಿ ಎಂದು ಒತ್ತಾಯಿಸಿದರು. 
 
ಇನ್ನು ರಾಘವೇಶ್ವರ ಶ್ರೀಗಳ ವಿರುದ್ಧ ತಮ್ಮದೇ ಮಠದ ಗಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದ ರಾಮಕತಾ ಗಾಯಕಿ ಪ್ರೇಮಲತಾ ಅವರು ಮತ್ತು ಮಠದ ಮತ್ತೋರ್ವ ಭಕ್ತೆ ಶ್ರೀಗಳ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಎರಡು ದೂರುಗಳನ್ನು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದ ಸಿಐಡಿ ಅಧಿಕಾರಿಗಳು, ಶ್ರೀಗಳ ವಿರುದ್ಧ 1351 ಪುಟಗಳ 151 ಸಾಕ್ಷಿಗಳ ಹೇಳಿಕೆಗಳಿರುವ ಚಾರ್ಜ್ ಶೀಟನ್ನು ಸಲ್ಲಿಸಿದ್ದಾರೆ. ಪರಿಣಾಮ ಶ್ರೀಗಳು ಪೀಠತ್ಯಾಗ ಮಾಡಲಿ ಎಂದು ಒತ್ತಾಯಿಸಿ ಇಂದು ವೇದಿಕೆಯ ಸದಸ್ಯರು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ