ರಾಘವೇಶ್ವರ ಶ್ರೀಗಳನ್ನು ಆಹ್ವಾನಿಸದ್ದಕ್ಕೆ ರಿಟ್ ಅರ್ಜಿ: ತಿರಸ್ಕರಿಸಿದ ಹೈಕೋರ್ಟ್‌

ಶನಿವಾರ, 23 ಮೇ 2015 (15:11 IST)
ಕೊಲ್ಲೂರು ಮೂಕಾಂಬಿಕಾ ಪ್ರತಿಷ್ಠಾನ ಕಾರ್ಯಕ್ರಮಕ್ಕೆ ಶ್ರೀಗಳನ್ನು ಆಹ್ವಾನಿಸದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ರಾಘವೇಂದ್ರ ಶ್ರೀಗಳ ಭಕ್ತರೋರ್ವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಇಂದು ನಡೆಸಿದ್ದು, ಸರ್ಕಾರದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ.
 
ಹೈಕೋರ್ಟ್‌ನ ಏಕ ಸದಸ್ಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿದ್ದು, ಸರ್ಕಾರದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. 
 
ಪ್ರಕರಣದ ಹಿನ್ನೆಲೆ: ಕೊಲ್ಲೂರು ಮೂಕಾಂಬಿಕಾ ಪ್ರತಿಷ್ಠಾನ ಕಾರ್ಯಕ್ರಮದ ಆಯೋಜನೆ ಹಿನ್ನೆಲೆಯಲ್ಲಿ ಸರ್ಕಾರವು ಜಿಲ್ಲಾಧಿಕಾರಿಗಳ ವರದಿಯನ್ನಾಧರಿಸಿ ಕಳೆದ ಮೇ 15ರಂದು ಸರ್ಕಾರಿ ಆದೇಶವನ್ನು ಹೊರಡಿಸಿದ್ದು, ಕಾರ್ಯಕ್ರಮವನ್ನು 2006ಕ್ಕೂ ಹಿಂದೆ ನಡೆಸುತ್ತಿದ್ದ ಪದ್ಧತಿಯನ್ನೇ ಅನುಸರಿಸಿಕೊಂಡು ನಡೆಸಲಿ ಎಂದು ಆದೇಶ ಹೊರಡಿಸಿತ್ತು. 
 
ಬಳಿಕ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಶ್ರೀಗಳ ಭಕ್ತ ಕಾಂತರಾಜ್ ಎಂಬುವವರು ರಿಟ್ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ್ದು, ಕೋರ್ಟ್ ಕೂಡ 2006ಕ್ಕೂ ಹಿಂದಿದ್ದ ಪದ್ಧತಿಯನ್ನೇ ಮುಂದುವರಿಸುವಂತೆ ಆದೇಶಿಸಿದೆ. ಆದ್ದರಿಂದ ಅರ್ಜಿದಾರ ಕಾಂತರಾಜ್ ತಾವು ಸ್ಲಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ. 
 
ಇನ್ನು 2006ರಿಂದ ಈಚಿನ ವರ್ಷಗಳಲ್ಲಿ ಆಗುತ್ತಿದ್ದ ಈ ಕಾರ್ಯಕ್ರಮಕ್ಕೆ ರಾಘವೇಶ್ವರ ಶ್ರೀಗಳನ್ನು ಕರೆಯುವುದು ವಾಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಸರ್ಕಾರದ ನಿಯಮ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಶ್ರೀಗಳನ್ನು ಕಾರ್ಯಕ್ರಮಕ್ಕೆ ಅಧಿಕೃತವಾಗಿ ಆಹ್ವಾನಿಸಬೇಕು ಎಂದು ಮನವಿ ಮಾಡಿದ್ದರು. 
 
ಕೊಲ್ಲೂರಿನ ಮೂಕಾಂಬಿಕಾ ದೇವಿಯ ಈ ಪ್ರತಿಷ್ಠಾನ ಮಹೋತ್ಸವವು ಪ್ರತಿ ವರ್ಷ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಕೂಡ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಮೇ 25ರಂದು ಆಯೋಜಿಸಲಾಗಿದೆ. 

ವೆಬ್ದುನಿಯಾವನ್ನು ಓದಿ