ಭೀಕರ ದುರಂತ: 12 ಜನ ದುರ್ಮರಣ

ಶುಕ್ರವಾರ, 19 ಫೆಬ್ರವರಿ 2016 (09:36 IST)
ಚಿತ್ರದುರ್ಗ ಜಿಲ್ಲೆಯ ಮಾಡನಾಯಕನಹಳ್ಳಿ ಬಳಿ ಲಾರಿ ಮತ್ತು ಟಾಟಾ ಏಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಬಾಲಕರು ಮತ್ತು ಒಬ್ಬ ಮಹಿಳೆ ಸೇರಿದಂತೆ 12 ಜನರು ದುರ್ಮರಣವನ್ನಪ್ಪಿದ್ದಾರೆ .
 
ನಸುಕಿನ ಜಾವ 3 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಈ ದುರ್ಘಟನೆ ನಡೆದಿದೆ.
 
ಚಿತ್ರದುರ್ಗದಿಂದ ಹೊಸಪೇಟೆಯತ್ತ ಕಬ್ಬಿಣ ತುಂಬಿಕೊಂಡು ಹೋಗುತ್ತಿದ್ದ ಲಾರಿ ಟಾಟಾ ಏಸ್‌ ಮೇಲೆ ಬಿದ್ದ ಪರಿಣಾಮ ಟಾಟಾ ಏಸ್‌ನಲ್ಲಿದ್ದ 11 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಟಾಟಾ ಏಸ್‌ ಸಂಪೂರ್ಣ ನಜ್ಜುಗುಜ್ಜಾಗಿದ್ದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಮೃತರೆಲ್ಲರೂ ಕ್ಯಾಸಪೂರ ಮತ್ತು ಕೊಡಗವಳ್ಳಿಯವರೆಂದು ತಿಳಿದುಬಂದಿದೆ.
 
ಲಾರಿ ಚಾಲಕ ಸಹ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
 
ಮೃತರನ್ನು ಗಂಗಮ್ಮ, ಚೇತನ್,  ದುಗ್ಗಪ್ಪ, ಮಂಜುನಾಥ್, ಮಂಜಪ್ಪ, ನಾಗಣ್ಣ, ಗಂಗಪ್ಪ, ಸುದೀಪ್, ಕೊಲ್ಲಪ್ಪ, ತಿಪ್ಪೇಸ್ವಾಮಿ, ಮಂಜುನಾಥ್ ಮತ್ತು ಚಾಲಕ ಕುಮಾರ್ ಎಂದು ಗುರುತಿಸಲಾಗಿದ್ದು ಲಾರಿಯಡಿ ಸಿಲುಕಿದ್ದ ಎಲ್ಲ ಶವಗಳನ್ನು ಹೊರ ತೆಗೆಯಲಾಗಿದೆ.
 
ತುರವನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
 

ವೆಬ್ದುನಿಯಾವನ್ನು ಓದಿ