ಸಾಲ ತೀರಿಸದೆ ಮನೆ ಬಿಟ್ಟು ಪರಾರಿಯಾದ ಪತಿರಾಯ: ಪತ್ನಿ ಆತ್ಮಹತ್ಯೆಗೆ ಯತ್ನ

ಸೋಮವಾರ, 5 ಅಕ್ಟೋಬರ್ 2015 (14:31 IST)
ಮೂರು ಲಕ್ಷ ಸಾಲ ಪಾವತಿಸದೆ ಪತಿ ಮನೆ ಬಿಟ್ಟು ಹೋದ ಎಂಬ ಕಾರಣದಿಂದ ಮನನೊಂದ ಮಹಿಳೆಯೋರ್ವಳು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ರಾಯಪುರ ಎಂಬ ಗ್ರಾಮದಲ್ಲಿ ನಡೆದಿದೆ.  
 
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಕುಮಾರಿ ಎಂದು ಹೇಳಲಾಗಿದ್ದು, ಈಕೆ ಇದೇ ಗ್ರಾಮದ ನಿವಾಸಿಯಾಗಿದ್ದಾಳೆ. ಅಲ್ಲದೆ ಸ್ತ್ರೀಶಕ್ತಿ ಸ್ವಸಹಾಯ ಸಂಘದಲ್ಲಿ ಸದಸ್ಯೆಯಾಗಿದ್ದ ಈಕೆ, ಕಂತಿನ ಆಧಾರದಲ್ಲಿ 3 ಲಕ್ಷ ಸಾಲ ಪಡೆದಿದ್ದಳು. ಆದರೆ ಆ ಹಣವನ್ನು ಮರು ಪಾವತಿಸುವಂತೆ ಸಂಘದ ಇತರೆ ಸದಸ್ಯೆಯರು ಮಹಿಳೆಗೆ ತೀವ್ರ ಹಿಂಸೆ ನೀಡುತ್ತಿದ್ದರು. ಇದೇ ವೇಳೆ ಸಾಲ ಮರು ಪಾವತಿ ಮಾಡಲು ಸಾಧ್ಯವಾಗದೆ ಮೂರು ತಿಂಗಳ ಹಿಂದೆ ಆಕೆಯ ಪತಿ ದೇವರಾಜು ಮನೆ ತೊರೆದಿದ್ದ. ಇದರಿಂದ ಕಂಗಾಲಾದ ಪತ್ನಿ ಕುಮಾರಿ, ಕಳೆದ ಒಂದು ವಾರದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. 
 
ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿರುವ ಆಕೆಯನ್ನು ಆಕನ ಅಕ್ಕ ನೋಡಿಕೊಳ್ಳುತ್ತಿದ್ದಾರೆ. ಸಾಲದ ಜೊತೆಗೆ ಪ್ರಸ್ತುತ ಆಸ್ಪತ್ರೆಯ ಖರ್ಚೂ ಕೂಡ ಹೆಗಲ ಮೇಲೆ ಬಿದ್ದಿದ್ದು, ಈಕೆಯ ಕುಟುಂಬ ಸಾಲಬಾಧೆಯಿಂದ ಮತ್ತಷ್ಟು ನರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  
 
ಇನ್ನು ತಮ್ಮ ಮಗ ಮನೆಬಿಟ್ಟು ಹೋಗಲು ಆತನ ಪತ್ನಿ ಕುಮಾರಿಯೇ ಕಾರಣಳಾಗಿದ್ದು, ಆತನೊಂದಿಗೆ ಆಗಾಗ ಜಗಳವಾಡುತ್ತಿದ್ದಳು ಎಂದು ಸೊಸೆ ಕುಮಾರಿಯನ್ನು ಅವರ ಅತ್ತೆ ಮತ್ತು ಮಾವ ದೂರುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ