ಮೂಗು ಹಿಡಿದು ಬಾಯಿ ತೆರೆಸಿ ಸಾಲ ಮನ್ನಾ ಮಾಡಿಸುತ್ತೇನೆ: ಬಿಎಸ್‌ವೈ

ಶನಿವಾರ, 3 ಅಕ್ಟೋಬರ್ 2015 (17:22 IST)
ಬಿಜೆಪಿ ರಾಜ್ಯ ಘಟಕದ ವತಿಯಿಂದ ಇಂದು ಹಮ್ಮಿಕೊಂಡಿರುವ ಎರಡನೇ ಹಂತದ ರೈತ ಚೈತನ್ಯ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಯಡಿಯೂರಪ್ಪ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯನವರೇ ನಾನು ನಿಮ್ಮ ಮೂಗು ಹಿಡಿದು ಬಾಯಿ ತೆರೆಸಿ ರೈತರ ಸಾಲ ಮನ್ನಾ ಮಾಡಿಸುತ್ತೇನೆ ಎಂದು ಶಪಥ ಮಾಡಿದ್ದಾರೆ. 
 
ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಸರ್ಕಾರ ಮೋಜಿನ ಆಡಳಿತ ನಡೆಸುತ್ತಿದೆ. ಆದರೆ ಅವರು ಅದಕ್ಕೆ ತಕ್ಕ ಪ್ರಾಯಾಶ್ಚಿತವನ್ನೂ ಕೂಡ ಅನುಭವಿಸಲಿದ್ದಾರೆ. ರಾಜ್ಯದೆಲ್ಲೆಡೆ ಸಂಚರಿಸಿ ರೈತರನ್ನು ಹುರಿದುಂಬಿಸುವ ಮೂಲಕ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಿದ್ದೇನೆ ಎಂದರು. 
 
ಇದೇ ವೇಳೆ, ಸಿದ್ದರಾಮಯ್ಯ ಅವರೇ ನೀವು ನಿಮ್ಮ ಕುರ್ಚಿಯಿಂದ ಯಾವಾಗ ಇಳಿಯುತ್ತೀರೋ ಗೊತ್ತಿಲ್ಲ. ಆದರೆ ನಾನು ನಿಮ್ಮ ಮೂಗು ಹಿಡಿದು ಬಾಯಿ ತೆರೆಸಿ ರೈತರ ಸಾಲ ಮನ್ನಾ ಮಾಡಿಸುತ್ತೇನೆ ಎಂದು ಶಪಥ ಮಾಡಿದ ಅವರು, ರಾಜ್ಯದ ಜನತೆಯಿಂದ ಸಂಗ್ರಹಿಸುತ್ತಿರುವ ತೆರಿಗೆ ಹಣ ಅವರ ಕಲ್ಯಾಣಕ್ಕಾಗಿಯೇ ಬಳಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ವೆಬ್ದುನಿಯಾವನ್ನು ಓದಿ