ಸದನ ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ: ಕುಮಾರಸ್ವಾಮಿ

ಮಂಗಳವಾರ, 25 ಆಗಸ್ಟ್ 2015 (17:04 IST)
ಬಿಬಿಎಂಪಿ ಚುನಾವಣೆಯಲ್ಲಿ ಪ್ರಬುದ್ಧ ಮತದಾರರು ಜೆಡಿಎಸ್ ಪಕ್ಷಕ್ಕೆ ನೀಡಿದ ತೀರ್ಪನ್ನು ಗೌರವಿಸುತ್ತೇನೆ. ಜನತೆಯ ತೀರ್ಪಿಗೆ ಬದ್ಧನಾಗಿ ಎಲ್ಲಾ ಸದನ ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
 
ನನಗೆ ಬೇಜಾರಾಗಿಲ್ಲ. ಮತದಾರರ ತೀರ್ಪಿನಿಂದ ಸಂತೋಷವಾಗಿದೆ. ಭ್ರಷ್ಟಾಚಾರದ ಪ್ರಮಾಣ ನೋಡಿ ಮತದಾರರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. 
 
ಮತದಾರರು ಹೆಚ್ಚು ಭ್ರಷ್ಟಾಚಾರ ಮಾಡುವವರಿಗೆ ಹೆಚ್ಚು ಸೀಟುಗಳನ್ನು ಗೆಲ್ಲಿಸಿಕೊಡ್ತಾರೆ. ಕಡಿಮೆ ಭ್ರಷ್ಟಾಚಾರ ಮಾಡುವವರಿಗೆ ಕಡಿಮೆ ಸೀಟುಗಳನ್ನು ಗೆಲ್ಲಿಸಿಕೊಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
 
ಗೆದ್ದಿರುವ ಪ್ರತಿ ಸದಸ್ಯರ ವಿರುದ್ಧ ದಾಖಲೆ ನೀಡಲು ಸಿದ್ದ, ಕೆರೆ ಕಟ್ಟೆ ನುಂಗಿದವರನ್ನು ಮತದಾರರು ಆಯ್ಕೆ ಮಾಡಿರುವುದು ಶೋಚನೀಯ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
 
ಬೆಂಗಳೂರಿನ ನಾಗರಿಕರರಿಗೆ ತಿಳುವಳಿಕೆ ಮೂಡುವವರೆಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ. ಪ್ರತಿಯೊಂದು ಸಮಸ್ಯೆಗಳನ್ನು ಎದುರಿಸಿಯೂ ಇಂತಹ ತೀರ್ಮಾನ ತೆಗೆದುಕೊಂಡಿರುವುದು ಬೇಸರ ತಂದಿದೆ ಎಂದರು. 
 
ಇನ್ಮುಂದೆ ಬೆಂಗಳೂರಿನ ನಾಗರಿಕರ ವಿಷಯಗಳಲ್ಲಿ ತಲೆಹಾಕುವುದಿಲ್ಲ. ರೈತರ ಸಮಸ್ಯೆಗಳತ್ತ ಮಾತ್ರ ಗಮನಹರಿಸುವುದಾಗಿ ಕುಮಾರಸ್ವಾಮಿ ಘೋಷಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ